ದಕ್ಷಿಣ ಕನ್ನಡ (ಫೆ.06): ಕರಾವಳಿ ಭಾಗದಲ್ಲಿ ಕಾಂಗ್ರೆಸ್ (Congress) ವಿರುದ್ದ ಮತ್ತೆ ಮುಸಲ್ಮಾನರ ಆಕ್ರೋಶ ಸ್ಫೋಟಗೊಂಡಿದೆ. ಪುತ್ತೂರು ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ನಾಯಕರಿಗೆ (Muslim Leaders) ಆಹ್ವಾನ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಕರಾವಳಿ ಕಾಂಗ್ರೆಸ್ ವಿರುದ್ದ ಮತ್ತೆ ಮುಸ್ಲಿಂ ನಾಯಕರ ಆಕ್ರೋಶ ಹೊರಹಾಕಿದ್ದಾರೆ. ಸಿಎಂ-ಡಿಸಿಎಂ ವಿರುದ್ಧವೂ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.
ಮುಸ್ಲಿಂ ನಾಯಕರ ಹೆಸರು ಕೈ ಬಿಟ್ಟಿದ್ಯಾಕೆ?
ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಪುತ್ತೂರಿನಲ್ಲಿ ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುತುವರ್ಜಿಯಲ್ಲಿ ನೂತನ ಕಾಂಗ್ರೆಸ್ ಭವನ ನಿರ್ಮಾಣವಾಗ್ತಿದೆ. ಆದ್ರೆ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಸ್ಲಿಂ ನಾಯಕರ ಹೆಸರು ಕೈ ಬಿಟ್ಟಿದ್ಯಾಕೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡ್ತಿದ್ದಾರೆ.
ಕರಾವಳಿ ಕಾಂಗ್ರೆಸ್ ವಿರುದ್ಧ ಆಕ್ರೋಶ
ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಪುತ್ತೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಮುಸ್ಲಿಂ ನಾಯಕನ ಹೆಸರು ಮುದ್ರಿಸದೇ ಭಾರೀ ಅಪಮಾನ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆಸಾಮಾಜಿಕ ತಾಣಗಳಲ್ಲಿ ಕಾಂಗ್ರೆಸ್ ವಿರುದ್ದ ಮುಸ್ಲಿಂ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
ಬಂಟ್ವಾಳದ ರೆಹಮಾನ್ ಹತ್ಯೆ ವೇಳೆ ಕಾಂಗ್ರೆಸ್ ವಿರುದ್ದ ಕರಾವಳಿ ಮುಸ್ಲಿಂ ಕಾರ್ಯಕರ್ತರು ಸಿಡಿದೆದ್ದಿದ್ದರು. ಆಗ ಮುಸ್ಲಿಂ ಕಾರ್ಯಕರ್ತರ ಆಕ್ರೋಶ, ಸ್ವತಃ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೂ ಮುಜುಗರ ತಂದಿತ್ತು.
ಅಸಮಾಧಾನಕ್ಕೆ ತೇಪೆ- ಮರುಮುದ್ರಣ
ಇದೀಗ ಪುತ್ತೂರಿನಲ್ಲಿ ಮುಸ್ಲಿಂ ನಾಯಕರ ಕಡೆಗಣನೆಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಭಾರೀ ಅಸಮಾಧಾನದ ಬೆನ್ನಲ್ಲೇ ತೇಪೆ ಹಚ್ಚಲು ಕೆಲಸವನ್ನ ಜಿಲ್ಲಾ ಕಾಂಗ್ರೆಸ್ ಮಾಡ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹೆಸರು ಹಾಕಿ ಮರುಮುದ್ರಣ ಮಾಡಿದೆ.
ಮುಸ್ಲಿಂ ನಾಯಕರ ಕಡೆಗಣನೆ ಆರೋಪ
ಆದ್ರೆ ಮತ್ತೆ ಪುತ್ತೂರು ಹಾಗೂ ದ.ಕ ಜಿಲ್ಲೆಯ ಹಲವು ಮುಸ್ಲಿಂ ನಾಯಕರ ಕಡೆಗಣನೆ ಮಾಡಿದ ಆರೋಪ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ಹರಿದಾಡ್ತಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ವಿರುದ್ದವೂ ಆಕ್ರೋಶ ಹೊರಹಾಕ್ತಿದ್ದಾರೆ.
ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ನಿಗಮದ ಅಧ್ಯಕ್ಷ ಗಫೂರ್, ಟಿ.ಎಂ.ಶಹೀದ್ ಹೆಸರು ಹಾಕಿಲ್ಲ ಎಂದು ಕಿಡಿಕಾಡಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದ ಶಿಲಾನ್ಯಾಸ ಕಾರ್ಯಕ್ರಮದಿಂದ ಅನೇಕ ನಾಯಕರು ದೂರ ಉಳಿಯುವ ಸಾಧ್ಯತೆ ಇದೆ.












































