ವಿದೇಶಗಳಲ್ಲಿ ಉದ್ಯೋಗ ಹುಡುಕುವ ಯುವಜನರನ್ನು ಸುಳ್ಳುಜಾಹಿರಾತುಗಳನ್ನು ನೀಡಿ ನಕಲಿ ಏಜೆಂಟರ ಮೂಲಕ ನಂಬಿಸಿ, ಪುಸಲಾಯಿಸಿ, ಪ್ರವಾಸಿ (ಟೂರಿಸ್ಟ್) ವೀಸಾದಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿಗೆ ತೆರಳಿದ ಬಳಿಕ ಅವರಿಂದ ಪಾಸ್ಪೋರ್ಟ್ ಮತ್ತಿತರ ದಾಖಲೆಗಳನ್ನು ಕಿತ್ತುಕೊಂಡು ಅವರನ್ನು ಅಜ್ಞಾತ ಸ್ಥಳದಲ್ಲಿ ಬಂಧಿಸಿಡುತ್ತಾರೆ.
ಅವರಿಂದ ಒತ್ತಾಯ ಪೂರಕವಾಗಿ ಮುಗ್ಧ ಹೂಡಿಕೆದಾರರಿಗೆ ಕರೆ ಮಾಡಿಸಿ, ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಯಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡುವುದಿಲ್ಲ. ಕುಟುಂ-ಬದವರನ್ನು ಸಂಪರ್ಕಿಸಲೂ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗುವವರು ಪ್ರೊಟೆಕ್ಟರ್ ಆಫ್ ಇಮಿಗ್ರೇಷನ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿಗಳನ್ನೇ ಆಯ್ಕೆ ಮಾಡಬೇಕು. ವಿದೇಶಿ ಉದ್ಯೋಗದ ಭರವಸೆ ನೀಡಿ ಜಿಲ್ಲೆಯ ಆರು ಮಂದಿಯನ್ನು ಸೈಬರ್ ಗುಲಾಮಗಿರಿಗೆ ತಳ್ಳಲಾಗಿತ್ತು. ಅವರನ್ನು ರಕ್ಷಿಸಲಾಗಿದ್ದು, ಅವರು ನೀಡಿದ ದೂರಿ ನನ್ವಯ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.












































