ಕಮಲಪಡೆ ಒಗ್ಗಟ್ಟಿಗೆ ಸದನ ಫಲ | ಅಶೋಕ್‌ ಪ್ರಸ್ತುತಿ, ಸುನೀಲ್ ಮಾತಿನ ಓಘ, ಬಿವೈವಿ ಸಮನ್ವಯದಿಂದ ಯಶಸ್ಸು

Picture of Savistara

Savistara

Bureau Report

ವಿಧಾನ ಮಂಡಲ ಅಧಿವೇಶನವೆಂದರೆ ಅದು ಕೇವಲ ಚರ್ಚೆಯ ವೇದಿಕೆಯಲ್ಲ, ಬದಲಾಗಿ ಸರ್ಕಾರದ ವೈಫಲ್ಯಗಳನ್ನು ಬೆತ್ತಲೆಗೊಳಿಸಲು ಪ್ರತಿಪಕ್ಷಗಳಿಗಿರುವ ಸುವರ್ಣಾವಕಾಶ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ರಾಜಕೀಯ ಅಖಾಡದಲ್ಲಿ ತುಸು ಪೀಚೆನಿಸಿದ್ದ ಬಿಜೆಪಿ, ಈ ಬಾರಿ ‘ಒಂದಾದವರು ಸಾಗುವರು, ಹಿರಿದಾದ ಸಾಧನೆಯನ್ನು ಮಾಡುವರು’ ಎಂಬಂತೆ ಸದನದ ಒಳಗೆ ತಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬದಿಗಿಟ್ಟು, ‘ಅಗ್ರೆಸಿವ್ ಮೋಡ್’ನಲ್ಲಿ ಕಾಣಿಸಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಿತು.ಅಧಿವೇಶನದ ಆರಂಭದಿಂದಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಖಚಿತ ಪ್ರಸ್ತುತಿ ಗಮನ ಸೆಳೆಯಿತು. ಸರ್ಕಾರವನ್ನು क ತೆಗೆದುಕೊಳ್ಳುವಲ್ಲಿ ಚಾಕಚಕ್ಯತೆ ಮೆರೆದ ಅಶೋಕ್, ಆಡಳಿತ ಪಕ್ಷಕ್ಕೆ ಬೆವರಿಳಿಸುವ ಪ್ರಯತ್ನ ಮಾಡಿದರು. ಇದಕ್ಕಾಗಿ ಮೊಗಸಾಲೆಯಲ್ಲಿ ಮೆಚ್ಚುಗೆ ಪಡೆದದ್ದು ಕಂಡುಬಂತು.ಇನ್ನು ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಕ್ರಿಕೆಟ್ ಅಂಗಳದ ‘ಪಿಂಚ್ ಹಿಟ್ಲರ್’ ರೀತಿ ಅಬ್ಬರಿಸಿದರು. ಅವರ ಮೊನಚು ಮಾತುಗಳು ಮತ್ತು ತೀಕ್ಷ್ಯ ವಾಗ್ದಾಣಗಳು ಸರ್ಕಾರದ ವೈಫಲ್ಯಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾದವು. ಇವರಿಗೆ ಸಾಥ್ ನೀಡಿದ ಹಿರಿಯ ನಾಯಕ ಸುರೇಶ್ ಕುಮಾರ್ ಸರ್ಕಾರವನ್ನು ಸಮರ್ಥವಾಗಿ ಇಕ್ಕಟ್ಟಿಗೆ ಸಿಲುಕಿಸಿದರೆ, ಅರವಿಂದ ಬೆಲ್ಲದ್ ಬೆನ್ನೆಲುಬಾಗಿ ನಿಂತಿದ್ದು ವಿಶೇಷವಾಗಿತ್ತು. ಈ ಎಲ್ಲ ಆಕ್ರಮಣಕಾರಿ ಆಟದ ಹಿಂದೆ ಇದ್ದಿದ್ದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರ ಸಮನ್ವಯದ ತಂತ್ರಗಾರಿಕೆ. ಪಕ್ಷದೊಳಗಿನ ನಾಯಕರಲ್ಲಿ ಸಮನ್ವಯತೆ ತಂದ ವಿಜಯೇಂದ್ರ, ಬಳಿಕ ಮಿತ್ರಪಕ್ಷ ಜೆಡಿಎಸ್ ಅನ್ನು ಯಶಸ್ವಿಯಾಗಿ ಜತೆಯಲ್ಲಿ ಕೊಂಡೊಯ್ದರು. ಹೊಸ ಸರ್ಕಾರ ಬಂದ ಬಳಿಕ 10 ಅಧಿವೇಶನ ಎದುರಿಸಿದಾಗಲೂ ಪರಸ್ಪರ ಅಸಹನೆಯೊಂದಿಗೆ ದಿನ ದೂಡುತ್ತಿದ್ದ ಬಿಜೆಪಿ ನಾಯಕರು, ಈ ಬಾರಿ ಮಾತ್ರ ‘ಒಂದು ತಂಡದ’ ರೀತಿ ಒಂದಾಗಿ ಹೋರಾಡಿದ್ದು ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಿದೆ. ಈ ಕುರಿತು ಆಡಳಿತ ಪಕ್ಷದ ಕಡೆಯಿಂದಲೂ ಪ್ರತಿಕ್ರಿಯೆ ಕೇಳಿಬಂತು. ಯಾವ ಮಟ್ಟಿಗೆ ಎಂದರೆ, ಸದನ ಬಿಟ್ಟು ಯಾರೂ ಬೇರೆ ಕೆಲಸ ಕಾರ್ಯಗಳಲ್ಲಿ ತೊಡಬೇಡಿ ಎಂದು ಮುಖ್ಯಮಂತ್ರಿಯವರು ಸಚಿವರೆಲ್ಲರಿಗೂ ಟಿಪ್ಪಣಿ ಹೊರಡಿಸಿದ್ದರು.ಇಡೀ ಅಧಿವೇಶನದಲ್ಲಿ ಮೂರು ಮತ್ತೊಂದು ಪ್ರಮುಖ ವಿಚಾರದತ್ತೇ ಗಿರಕಿಹೊಡೆದಿತ್ತು. ರಾಜ್ಯಪಾಲರ ಭಾಷಣ ಪ್ರಸಂಗ, ಅಬಕಾರಿ ಸಚಿವರ ರಾಜೀನಾಮೆ ವಿಚಾರ, ನರೇಗಾ ಚರ್ಚೆ, ಹಿಂದುಳಿದ ವರ್ಗದ ನಿಗಮಗಳಿಗೆ ಅನುದಾನ ಖೋತಾ ಹೀಗೆ ವಿವಿಧ ವಿಷಯಕ್ಕೆ ಪ್ರಾಮುಖ್ಯತೆ ಇತ್ತು. ಅದನ್ನು ಪ್ರತಿಪಕ್ಷ ಸರಿಯಾಗಿಯೇ ಬಳಸಿಕೊಂಡಿತು. ಅಬಕಾರಿ ಸಚಿವರ ರಾಜೀನಾಮೆ ಕೊಡಿಸಬೇಕೆಂಬ ಹಠಕ್ಕೆ ಫಲ ಸಿಗದೇ ಹೋದರೂ ಅಹೋರಾತ್ರಿ ಧರಣಿ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸುವಲ್ಲಿ ಸಫಲವಾಯಿತು.

[t4b-ticker]
error: Content is protected !!