ತಿರುಪತಿ ಸೇರಿದಂತೆ 2 ದೇವಾಲಯಗಳ ಲಡ್ಡುಗೆ ’Bathroom Cleaner’ ಬಳಕೆ : ಜಗನ್ ವಿರುದ್ದ ಸಿಎಂ ನಾಯ್ಡು ಆರೋಪ

Picture of Savistara

Savistara

Bureau Report

ಅಮರಾವತಿ : ನಾಡಿನ ಪ್ರಸಿದ್ದ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ವಿಶ್ವವಿಖ್ಯಾತ ಲಡ್ಡು, ಮತ್ತೆ ಸುದ್ದಿಯನ್ನು ಮಾಡುತ್ತಿದೆ. ಈ ಸಂಬಂಧ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಿಂದಿನ ವೈಎಸ್ ಜಗನ್ಮೋಹನ್ ರೆಡ್ಡಿ ಸರ್ಕರದ ವಿರುದ್ದ ಗುರುತರ ಆರೋಪವನ್ನು ಮಾಡಿದ್ದಾರೆ.

ಪವಿತ್ರ ಪ್ರಸಾದಕ್ಕೆ ಜಗನ್ ಸರ್ಕಾರ ಅಶುದ್ದತೆಯ ಕಳಂಕವನ್ನು ತಂದಿದೆ. ಲಡ್ಡು ತಯಾರಿಕೆಯಲ್ಲಿ ಬಾತ್’ರೂಂ ಕ್ಲೀನರ್ ಅನ್ನು ಬಳಸಲಾಗಿದೆ ಎಂದು ನಾಯ್ಡು ಆರೋಪಿಸಿದ್ದಾರೆ. ವರದಿಯನ್ನು ಆಧರಿಸಿ ಈ ಹೇಳಿಕೆಯನ್ನು ನೀಡುತ್ತಿರುವುದಾಗಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಹೇಳಿಕೆಗೆ, ಜಗನ್ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

“ವೈಎಸ್ ಜಗನ್ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಅಪವಿತ್ರಗೊಂಡಿದೆ. ಬಾತ್’ರೂಂ ಸ್ವಚ್ಚಗೊಳಿಸಲು ಬಳಸುವ ರಾಸಾಯನಿಕಗಳು ಬೆರೆತಿದ್ದ ಕಲಬೆರಕೆ ತುಪ್ಪವನ್ನು ಬಳಸಿಕೊಳ್ಳಲಾಗಿದೆ. ತಿರುಪತಿ ದೇವಾಲಯಕ್ಕೆ ಮಾತ್ರವಲ್ಲದೇ, ಶ್ರೀಶೈಲ ದೇವಾಲಯಕ್ಕೂ ಇದೇ ರೀತಿ ಮಾಡಲಾಗಿದೆ” ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಕರ್ನೂಲ್ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಚಂದ್ರಬಾಬು ನಾಯ್ಡು, ಹಿಂದಿನ ಕಲಬೆರಕೆ ತುಪ್ಪವನ್ನು ಬಳಸಿ ಪ್ರಸಾದವನ್ನು ತಯಾರಿಸಿದೆ. ಆ ಮೂಲಕ, ವೆಂಕಟೇಶ್ವರ ಮತ್ತು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ ಘನತೆಯನ್ನು ಕುಗ್ಗಿಸಿದ್ದಾರೆ. ಜೊತೆಗೆ, ಕೋಟ್ಯಾಂತರ ಭಕ್ತರ ಭಾವನೆ ಜೊತೆಗೆ ಆಟವಾಡಿದೆ ಎಂದು ಚಂದ್ರಬಾಬು ನಾಯ್ಡು ಗುರುತರ ಆರೋಪವನ್ನು ಮಾಡಿದ್ದಾರೆ.

ಹಿಂದಿನ ಸರ್ಕಾರದ ಸಂಪೂರ್ಣ ಐದು ವರ್ಷದ ಅವಧಿಯಲ್ಲಿ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬು ಮಿಶ್ರಿತ ಕಲಬೆರಕೆ ತುಪ್ಪವನ್ನು ತಿರುಪತಿ ಮತ್ತು ಶ್ರೀಶೈಲ ದೇವಾಲಯದ ಪ್ರಸಾದಕ್ಕೆ ಬಳಸಿಕೊಂಡಿದೆ. ರಾಷ್ಟ್ರೀಯ ಡೈರಿ ಅಭಿವೃದ್ದಿ ಮಂಡಳಿಯ ವರದಿಯನ್ನು ಆಧರಿಸಿ ನಾನು ಹೇಳಿಕೆಯನ್ನು ನೀಡುತ್ತಿದ್ದೇನೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಪ್ರಾಣಿಗಳ ಕೊಬ್ಬಿನ ಬೆಲೆ ಕಮ್ಮಿ ಇರುವುದರಿಂದ, ಲಡ್ಡು ತಯಾರಿಕೆಯಲ್ಲಿ ರಾಜಿಯನ್ನು ಮಾಡಿಕೊಳ್ಳಲಾಗಿದೆ. ತಿರುಪತಿ ಮತ್ತು ಶ್ರೀಶೈಲ ದೇವಾಲಯಕ್ಕೆ ಇರುವ ಪಾವಿತ್ರ್ಯತೆ ಮತ್ತು ಘನತೆಯನ್ನು ಗಮನದಲ್ಲಿ ಇಟ್ಟುಕೊಂಡು, ಹೆಚ್ಚು ಮಾತನಾಡಬಾರದು ಎಂದು ನಿರ್ಧರಿಸಿದ್ದೇವೆ ಎಂದು ಸಿಎಂ ನಾಯ್ಡು ಹೇಳಿದ್ದಾರೆ.

ಕೊಬ್ಬಿನ ಕಲಬೆರಕೆ ನಡೆದಿಲ್ಲ ಎಂದು ಸಿಬಿಐನವರು ಕ್ಲೀನ್ ಚಿಟ್ ನೀಡಿದ್ದಾರೆಂದು ವೈಎಸ್ ಜಗನ್ ವಾದಿಸುತ್ತಿದ್ದಾರೆ. ಅಸಲಿಗೆ, ಕಲಬೆರಕೆ ನಡೆದಿದೆ, ಇದುವೇ ಸತ್ಯ. ಇದನ್ನು ವೈಎಸ್ ಜಗನ್ ಅವರ ಚಿಕ್ಕಪ್ಪ ವೈವಿ ಸುಬ್ಬಾರೆಡ್ಡಿ ಕೂಡಾ ಒಪ್ಪಿಕೊಂಡಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.ಹಿಂದಿನ ಸರ್ಕಾರದ ಅವಧಿಯಲ್ಲಾದ ತಪ್ಪನ್ನು ನಾವು ಸರಿಪಡಿಸುತ್ತಿದ್ದೇವೆ, ದೇವರ ಪ್ರಸಾದ ಮತ್ತು ಅನ್ನಪ್ರಸಾದದ ವಿಚಾರದಲ್ಲಿ ಯಾವುದೇ ತಪ್ಪಾಗಬಾರದು ಎಂದು ಟಿಟಿಡಿಗೆ ನಾವು ಸೂಚಿಸಿದ್ದೇವೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ನಾಯ್ಡು ಅವರ ಹೇಳಿಕೆ ರಾಜಕೀಯ ಪ್ರೇರಿತ ಎಂದು ವೈಎಸ್ ಜಗನ್ ಕಿಡಿಕಾರಿದ್ದಾರೆ. ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ, ತಿರುಪತಿ ದೇವಾಲಯಕ್ಕೆ ಪುಣ್ಯಾರ್ಚನೆಯನ್ನು ಮಾಡಿಸಲಾಗಿತ್ತು.

[t4b-ticker]
error: Content is protected !!