ಯಾರ್ರಿ ಅವನು, ಅವನೇನು ಹೈಕಮಾ೦ಡಾ?: ಪ್ರೀತಂಗೌಡ ವಿರುದ್ಧ ಶಾಸಕ ಎ.ಮಂಜು ಆಕ್ರೋಶ

Picture of Savistara

Savistara

Bureau Report

ಅರಕಲಗೂಡು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರುದ್ಧ ಶಾಸಕ ಎ.ಮಂಜು ವಾಗ್ದಾಳಿ ನಡೆಸಿದರು.

`ಯಾರ್ರಿ ಅವನು, ಅವನೇನು ಹೈಕಮಾಂಡಾ? ನಮಗೆ ಹೇಳಬೇಕಿರುವುದು ಮತ್ತು ಹೇಳಿರುವುದು ಹೈಕಮಾಂಡ್. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳು ಮೈತ್ರಿಯಾಗಿ ಹೋದರೆ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರುತ್ತದೆ ಎಂಬ ಅಭಿಪ್ರಾಯ ಜನರಲ್ಲಿ ಇದೆ’ ಎಂದರು.ತಾಲ್ಲೂಕಿನ ಕೆಲಗಳಲೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಗೆ ಮಾತ್ರ ಮೈತ್ರಿ ಬೇಕು. ಆದರೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಬೇಡ ಎಂದರೆ ಅವರಿಗೆ ಯಾವ ನೈತಿಕತೆ ಇರುತ್ತದೆ? ಪಕ್ಷ ಕಾರ್ಯಕರ್ತರು ಉಳಿಯಬೇಕಲ್ಲ. ಪಕ್ಷ ನಮಗಾಗಿ ಅಲ್ಲ, ಕಾರ್ಯಕರ್ತರಿಗಾಗಿ ಇರಬೇಕು. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭಿವೃದ್ಧಿ ಪರ ಎನ್ನುವುದು ನನ್ನ ಭಾವನೆ’ ಎಂದು ಹೇಳಿದರು.’ಕಳೆದ ಲೋಕಸಭಾ ಚುನಾವಣೆಯ ಸಂದರ್ಭವನ್ನು ಉಲ್ಲೇಖಿಸಿದ ಅವರು, ಯಾರು ಯಾರ ಜೊತೆ ಕೈಜೋಡಿಸಿದರು? ಏಕೆ ಜೋಡಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷದ ನಿಷ್ಠೆ ಇದ್ದಿದ್ದರೆ ಹಾಸನ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಂಸದ ಇರುತ್ತಿದ್ದರು’ ಎಂದು ಟೀಕಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ತಮಗೆ ಟಿಕೆಟ್ ಸಿಗಲಿದೆ ಎಂಬ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಎ.ಮಂಜು, ‘ಟಿಕೆಟ್ ಕೊಡುವುದು, ಬಿಡುವುದು ಹೈಕಮಾಂಡ್. ಹಾಲಿ ಜೆಡಿಎಸ್ ಶಾಸಕರು ಇದ್ದಾಗ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಗೆದ್ದ ಕ್ಷೇತ್ರದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವುದು ರೂಢಿ’ ಎಂದರು.’ಈ ಹಿಂದೆ 50 ಸಾವಿರಕ್ಕಿಂತ ಒಂದು ಮತದ ಅಂತರದಲ್ಲಿ ಸೋತರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದವರು ಇನ್ನೂ ಏಕೆ ರಾಜಕೀಯದಲ್ಲಿದ್ದಾರೆ ಎಂಬುದನ್ನು ಯೋಚಿಸಬೇಕು. ಮಾತನಾಡುವ ಮುಂಚೆ ಯೋಚಿಸಬೇಕಿತ್ತು’ ಎಂದು ಸಲಹೆ ನೀಡಿದರು.’ಜನರು ಪ್ರಜ್ಞಾವಂತರು, ಬುದ್ಧಿವಂತರು. ನಮ್ಮ ಮಾತು ಜನರಿಗೆ ತಪ್ಪಾಗಿ ಬಿಂಬಿಸಬಾರದು. ಎಲ್ಲ ಚಿಹ್ನೆಯ ಮೇಲೆ ನಡೆಯುವ ಚುನಾವಣೆಯಲ್ಲೂ ಮೈತ್ರಿಯಾಗಿ ಹೋಗುವುದು ಕಾರ್ಯಕರ್ತರ ದೃಷ್ಟಿಯಿಂದ ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು.

ಸಚಿವ ದರ್ಜೆ-ಖಂಡನೆ: ನಿಗಮ-ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ, ವೇತನ ಹಾಗೂ ಬಾಡಿಗೆ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮವನ್ನು ಶಾಸಕ ಎ.ಮಂಜು ಖಂಡಿಸಿದರು.’ಮುಖ್ಯಮಂತ್ರಿಯ ಓಲೈಕೆಗಾಗಿ ಸರ್ಕಾರ ಸವಲತ್ತುಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಅವರು, ಈಗ ಸರ್ಕಾರದ ಬಳಿ ದುಡ್ಡಿಲ್ಲ. ರಸ್ತೆ ಗುಂಡಿ ಮುಚ್ಚಲು ಹಣ ಇಲ್ಲದ ಸ್ಥಿತಿಯಿದೆ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಎಸ್‌ಸಿ-ಎಸ್‌ಟಿ ಹಣವನ್ನು ದುರ್ಬಳಕೆ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.’ಮುಖ್ಯಮಂತ್ರಿಗೆ ಪರ-ವಿರೋಧದ ಆಧಾರದಲ್ಲಿ ಕ್ಯಾಬಿನೆಟ್ ದರ್ಜೆ ನೀಡಿ, ವೇತನ ಹೆಚ್ಚಿಸಿ ಓಲೈಸುವ ಕಾರ್ಯಕ್ರಮ ನಡೆಯುತ್ತಿದೆ. ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು ಎಂಬ ಆಸೆಗೆ ಜನರ ತೆರಿಗೆ ಹಣವನ್ನು ಈ ರೀತಿ ಖರ್ಚು ಮಾಡುವುದು ತಪ್ಪು. ಸರ್ಕಾರ ಜನರ ಸರ್ಕಾರ, ದುಡ್ಡು ಜನರದ್ದು’ ಎಂದು ಹೇಳಿದರು.

[t4b-ticker]
error: Content is protected !!