ಬೆಳ್ತಂಗಡಿ: ಇಲ್ಲಿಯ ಜೂನಿಯರ್ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಮುಸುಕುಧಾರಿಗಳ ತಂಡವೊಂದು ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ, ಚೂರಿಯಿಂದ ತಿವಿದ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಇದೊಂದು ಕಟ್ಟು ಕಥೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂಬ ವದಂತಿ ಹಬ್ಬಿದೆ.ಸುದೇಮುಗೇರು ಸಮೀಪದ ವಿದ್ಯಾರ್ಥಿನಿ ಕಾಲೇಜಿಗೆ ಹೋಗಲೆಂದು ನಿನ್ನೆ ಬೆಳಿಗ್ಗೆ ಸುಮಾರು 8.45ಕ್ಕೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಸುದೇಮುಗೇರು ಸಮೀಪ ರಸ್ತೆ ತಿರುವಿನಲ್ಲಿ ಕಾರಿನಲ್ಲಿ ಬಂದ ಮೂರು ಮಂದಿ ಮುಸುಕುಧಾರಿಗಳ ತಂಡ ದ್ವಿಚಕ್ರವಾಹವನ್ನು ತಡೆಗಟ್ಟಿ ವಿದ್ಯಾರ್ಥಿನಿಯನ್ನು ಎಳೆದೊಯ್ಯಲು ಯತ್ನಿಸಿದರೆನ್ನಲಾಗಿದೆ.
ಈ ಸಂದರ್ಭ ವಿದ್ಯಾರ್ಥಿನಿ ಪ್ರತಿರೋಧ ತೋರಿದಾಗ ಮುಸುಕುಧಾರಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್ ಸವಾರ ಹಾರ್ನ್ ಮಾಡಿದ್ದನ್ನು ಕೇಳಿಸಿಕೊಂಡ ತಂಡ ಅಲ್ಲಿಂದ ಪರಾರಿಯಾಯಿಂತೆಂದು ಗಾಯಾಳು ವಿದ್ಯಾರ್ಥಿನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯ ಕೈಗೆ ಗಾಯವಾಗಿದ್ದು, ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು.
ಇದೀಗ ಪ್ರಕರಣ ಹೊಸ ತಿರುವುವನ್ನು ಪಡೆದುಕೊಂಡಿದ್ದು, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ, ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟುಮಾಡಿ
ಕೊಂಡ ಗಾಯ (Self inflicted wound) ಎಂದು ಕಂಡು ಬಂದಿದೆ.ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿದ್ದೆನೆಂದು ಬಾಲಕಿ ಮತ್ತೋಂದು ಹೇಳಿಕೆ ನೀಡಿದ್ದಾಳೆ.
ವಿದ್ಯಾರ್ಥಿನಿಗೆ ಕಾಲೇಜಿಗೆ ಹೋಗಲು ಇಷ್ಟವಿರಲಿಲ್ಲ. ಇದಕ್ಕಾಗಿ ವಿದ್ಯಾರ್ಥಿನಿ ಈ ಕಟ್ಟುಕತೆಯನ್ನು ಕಟ್ಟಿ, ಬ್ಲೆಡ್ ನಿಂದ ಕೈಗೆ ಗೀರಿ ಕೊಂಡಿದ್ದಳು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ ಇನ್ನಷ್ಟೇ ಸ್ವಷ್ಟ ಮಾಹಿತಿ ನೀಡಬೇಕಾಗಿದೆ.
ಬಾಲಕಿಯು ಅಪ್ರಾಪ್ತಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಸದ್ರಿ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸ ಲಾಗುವುದು. ಅಪ್ರಾಪ್ತಗೆ ಚಲಾಯಿಸಲು ವಾಹನ ನೀಡಿರುವ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












































