ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅವಧಿಗೆ ಮುನ್ನವೇ ಬೇಸಿಗೆಯ ಬೇಗೆ ಆರಂಭವಾಗಲಿದೆ ಎನ್ನುತ್ತಿದ್ದಾರೆ ಹವಾಮಾನ ತಜ್ಞರು.ಕನಿಷ್ಠ ತಾಪಮಾನ ವಾಡಿಕೆಯಷ್ಟೇ ಇದ್ದರೂ ಕರಾವಳಿ ಮತ್ತಿತರ ಕೆಲವು ಭಾಗಗಳಲ್ಲಿ ಈಗಾಗಲೇ ಗರಿಷ್ಠ ತಾಪಮಾನದಲ್ಲಿ ಸುಮಾರು 2-3 ಡಿಗ್ರಿಯಷ್ಟು ಏರಿಕೆಯಾಗಿದೆ. ವಾಡಿಕೆಯಂತೆ ಮಾರ್ಚ್ ಮೊದಲ ವಾರದಿಂದ ಬೇಸಿಗೆ ಆರಂಭವಾಗುತ್ತದೆ. ಆದರೆ, ಈ ಬಾರಿ ಫೆಬ್ರವರಿ ಮೂರನೇ ವಾರದಿಂದಲೇ ಬೇಸಿಗೆ ಆರಂಭವಾಗುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯದ ಹಲವೆಡೆ 31ರಿಂದ 37 ಡಿಗ್ರಿಯವರೆಗೆ ತಾಪಮಾನ ದಾಖಲಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರಾದ ಶ್ರೀನಿವಾಸ್ ರೆಡ್ಡಿ,ಫೆಬ್ರವರಿ ತಿಂಗಳಾಂತ್ಯದ ಹೊತ್ತಿಗೆ ಕರಾವಳಿ ಭಾಗದಲ್ಲಿ ಹೆಚ್ಚಾಗಿರುವ ಒಣ ಹವೆ, ಅಧಿಕ ಬಿಸಿಲು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಾದ್ಯಂತ ವಿಸ್ತರಣೆ ಆಗಲಿದೆ. ಶಾಖದ ಅಲೆ ವಾತಾವರಣ ನಿರ್ಮಾಣವಾಗಲಿದೆ. ವಾಡಿಕೆಯಷ್ಟು ಹಲವೆಡೆ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.ಕರ್ನಾಟಕದಲ್ಲಿ ಚಳಿ ವಾತಾವರಣ ಮರೆಯಾಗಿ ಬಿಸಿಯ ‘ವಾತಾವರಣ ನಿರ್ಮಾಣವಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ಉಷ್ಣ ವಲಯದ ಮಟ್ಟದಲ್ಲಿ ಈ ಪ್ರದೇಶದ ಮೇಲೆ ಹಗುರದಿಂದ ಮಧ್ಯಮ ಪೂರ್ವ/ಈಶಾನ್ಯ ಮಾರುತಗಳು ಮೇಲುಗೈ ಸಾಧಿಸುತ್ತಿವೆ. ಬೇಸಿಗೆ ಕಾಲವಾಗಿದ್ದರಿಂದ ನಿರಂತರವಾಗಿ ಶಾಖದ ಅಲೆಯ ಪ್ರಭಾವ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.ಕರಾವಳಿ ಭಾಗದಲ್ಲಿ ಅತೀ ಗರಿಷ್ಠ ತಾಪಮಾನ ದಾಖಲಾಗಿದೆ.
ಕಾರವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34.4 ಡಿಗ್ರಿ ಸೆಲ್ಸಿಯಸ್, ಮಂಗಳೂರು ಏರ್ಪೋರ್ಟ್ 34.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ 33 ಡಿಗ್ರಿ ಸೆಲ್ಸಿಯಸ್, ಹಾವೇರಿ, ಗದಗ ಮತ್ತು ಕೊಪ್ಪಳ ತಲಾ 32 ಡಿಗ್ರಿ ಸೆಲ್ಸಿಯಸ್, ಹಾಸನ, ಮೈಸೂರು, ಹಿರಿಯೂರು, ವಿಜಯಪುರ, ಗಂಗಾವತಿ, ಬೆಳಗಾವಿ ಏರ್ಪೋರ್ಟ್, ರಾಯಚೂರು, ಕೋಲಾರದಲ್ಲಿ ತಲಾ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












































