ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಬಹುಪಾಲು ಮುಕ್ತಾಯದ ಹಂತದಲ್ಲಿದೆ. ಆದರೆ ಆನೆದಾಟು ಸ್ಥಳ ಆಯ್ಕೆ ವಿಚಾರಲ್ಲಿ ಹೈಕೋರ್ಟ್ ತಡೆ ನೀಡಿದ ಕಾರಣ ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಸುಮಾರು 400 ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಸ್ಥಗಿತಕೊಂಡಿದೆ.
ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಡ ಎಂಬಲ್ಲಿ ಆನೆದಾಟು ಯೋಜನೆ ಜಾರಿಗೊಳಿಸುವ ವಿಚಾರವನ್ನು ಪ್ರಶ್ನಿಸಿ ಲಾವತ್ತಡ್ಕ ಕಳೆಂಜಾಲು ನಿವಾಸಿ ಹರಿಶ್ಚಂದ್ರ ಗೌಡ ಹಾಗೂ ರೆಖ್ಯದ ಮಯ್ಯಳಿ ನಿವಾಸಿ ಜೋಸ್ ಅವರು ಹೈಕೋರ್ಟ್ನಲ್ಲಿರಿಟ್ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಹೈಕೋರ್ಟ್ ಇಲ್ಲಿ ಆನೆದಾಟು ನಿರ್ಮಿಸುವುದಕ್ಕೆ ತಡೆಯಾಜ್ಞೆ ನೀಡಿದೆ. ಹೀಗಾಗಿ 400 ಮೀ. ಹೆದ್ದಾರಿ ಕಾಮಗಾರಿ ನಿಲ್ಲಿಸಲಾಗಿದೆ.
ಸದ್ಯ ಇಲ್ಲಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಅರ್ಜಿದಾರರ ದೂರು ಏನು?: ಲಾವತಡ್ಕದ ಕಳೆಂಜಾಲುಸಂಪೂರ್ಣ ವಸತಿ ಪ್ರದೇಶ. ಇಲ್ಲಿ ಆನೆ ದಾಟು ಮಾಡಿಸಿದರೆ ಆನೆಗಳು ನೇರವಾಗಿ ಮನೆಯಂಗಳಕ್ಕೆ ಬರುವ ಅಪಾಯವಿದೆ. ಈ ಭಾಗದಲ್ಲಿ ಆನೆಗಳು ಓಡಾಟ ಮಾಡಿದ
ನಿದರ್ಶನವಿಲ್ಲ. ಆನೆಗಳು ಸಹಜವಾಗಿ ಸಾಗುವ ಹಾದಿಯಲ್ಲಿ ಆನೆದಾಟು ಮಾಡಬೇಕೇ ಹೊರತು, ಆನೆಗಳು ಸಂಚರಿಸದೇ ಇರುವಲ್ಲಿ ಮಾಡಿದರೆ ಜನವಸತಿ ಪ್ರದೇಶದಲ್ಲಿ ಆನೆಗಳು ನಡೆದಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಬಾಳೆಮಾರು, ಅಡೆಂಜಬೈಲು, ಕಲ್ಲುಗುಡ್ಡೆ, ಕೋಣಾಣೆ ಮೊದಲಾದೆಡೆ 400ಕ್ಕೂ ಹೆಚ್ಚು ಮನೆಗಳು, ದೇವಾಲಯ, ಶಾಲೆ ಇದೆ. ಇಲ್ಲಿ ಆನೆದಾಟು ರಚಿಸುವುದು ಸಂಪೂರ್ಣ ಅವೈಜ್ಞಾನಿಕ ಎಂದು ಅರ್ಜಿದಾರರು ವಾದಿಸಿದ್ದರು.ಅರ್ಜಿದಾರ ಹರಿಶ್ಚಂದ್ರ ಗೌಡ ಪ್ರತಿಕ್ರಿಯೆ ನೀಡಿ, ನಮ್ಮ ಆಕ್ಷೇಪ ಆನೆ ದಾಟಿಗೆ ಆಯ್ಕೆ ಮಾಡಲಾದ ಸ್ಥಳದ ವಿರುದ್ದ ಮಾತ್ರ. ರಸ್ತೆ ಕಾಮಗಾರಿಗೆ ನಾವು ಅಡ್ಡಿ ಮಾಡಿಲ್ಲ ಎಂದು ಹೇಳಿದ್ದಾರೆ.
ಮೂಲ ಯೋಜನೆ ಬದಲು?
ಮೂಲ ಯೋಜನಾ ವರದಿ ಪ್ರಕಾರ, ಹೆದ್ದಾರಿಯು ಲಾವತ್ತಡ್ಕ ಪೇಟೆಯಿಂದ ನೇರವಾಗಿ ಸಾಗಬೇಕಾಗಿತ್ತು. ಅಲ್ಲಿಂದ 1 ಕಿ.ಮೀ. ದೂರದಲ್ಲಿ ಎರಡೂ ಬದಿ ರಕ್ಷಿತ ಅರಣ್ಯವಿರುವ ಪ್ರದೇಶವನ್ನು ಆನೆ ದಾಟು ಎಂದು ಗುರುತಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ಭಾಗದಲ್ಲಿ ಬಂಡೆಕಲ್ಲು ಇದೆ ಎಂಬ ಕಾರಣಕ್ಕೆ ಆನೆದಾಟು ಸ್ಥಳ ಬದಲಾವಣೆ ಮಾಡಲಾಗಿದೆ ಎಂಬ ಆರೋಪಗಳಿವೆ.













































