ಪುತ್ತೂರು: ಕಾಂಗ್ರೆಸ್ ಪಕ್ಷದವರು ನರೇಗಾ ಉಳಿಸಿ ಎನ್ನುವ ಪಾದಯಾತ್ರೆಯನ್ನು ಕೇಂದ್ರ ಸರಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡುವ ಬದಲು ಗುಂಡಿ ಬಿದ್ದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಮಾಡಿದರೆ ಉತ್ತಮ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜೀವ ಮಠಂದೂರು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಮೂಲಕ ವಿಕಸಿತ ಭಾರತ್ ಉದ್ಯೋಗ ಮತ್ತು ಆ ಜೀವಿಕಾ ಮಿಷನ್ ಎನ್ನುವ ಹೆಸರಿನಲ್ಲಿ ಮನ್ ರೇಗಾ ಹೆಸರನ್ನು ಬದಲಾಯಿಸಿದೆ.
ಅಲ್ಲದೆ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ಧೇಶದಿಂದ ಬಯೋಮೆಟ್ರಿಕ್ ಹಾಜರಾತಿ ಸೇರಿದಂತೆ ಹಲವು ಪಾರದರ್ಶಕತೆಯನ್ನು ತಂದಿದೆ. ಆದರೆ ಕಾಂಗ್ರೇಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾರಣ ಈ ಬದಲಾವಣೆ ಕಾಂಗ್ರೆಸ್ ನವರಿಗೆ ತೊಂದರೆಯಾಗಿದೆ. ಈ ಕಾರಣಕ್ಕೆ ಯೋಜನೆಯ ಹೆಸರು ಬದಲಾಯಿಸಿದ್ದಾರೆ ಎಂದು ಆರೋಪಿಸಿ ಪಾದಯಾತ್ರೆಯ ಬೀದಿ ರಂಪಾಟ ಮಾಡುತ್ತಿದೆ ಎಂದರು.













































