ಗಣ್ಯರ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸೌಧದ ಕಾರಿಡಾರ್ ಪ್ರವೇಶಕ್ಕೆ ಮಿತಿ ಹಾಕಿರುವ ಸರ್ಕಾರದ ಕ್ರಮಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪತ್ರಕರ್ತರು ಶುಕ್ರವಾರ ಕಪ್ಪು ಬಟ್ಟೆ ಧರಿಸಿ ಸಾಂಕೇತಿಕ ಧರಣಿ ನಡೆಸಿದರು.ವಿಧಾನಸೌಧ ಹಾಗೂ ವಿಕಾಸ ಸೌಧ ಆವರಣದ ನಡುವಿನ ಗಾಂಧಿ ಪ್ರತಿಮೆ ಮುಂದೆ ಜಮಾಯಿಸಿದ್ದ ಮಾಧ್ಯಮ ಪ್ರತಿನಿಧಿಗಳು ಮೌನ ಪ್ರತಿಭಟನೆ ನಡೆಸಿದರು. ಬಳಿಕ ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಸ್ಥಳಕ್ಕಾಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಕೇವಲ ಕೆಂಗಲ್ ಗೇಟ್ ಪೋರ್ಟಿಕೋದಲ್ಲಿ ಮಾತ್ರ ಹೇಳಿಕೆಗಳನ್ನು ಪಡೆಯಲು ಸೀಮಿತಗೊಳಿಸಿ ಡಿಪಿಎಆರ್ ಹೊರಡಿಸಿದ್ದ ಆದೇಶವು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಪತ್ರಕರ್ತರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರದ ಈ ಕ್ರಮದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಸರ್ಕಾರದ ಹುಳುಕುಗಳು ಹೊರಬರಬಾರದು ಎಂಬ ಕಾರಣಕ್ಕೆ ಸಿಎಂ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿದ್ದು, ಇದು ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ಇದು ‘ಅವಿವೇಕಿ ನಿರ್ಧಾರ’ ಎಂದು ಕರೆದರೆ, ಮಾಜಿ ಸಚಿವ ವಿ. ಸುನೀಲ್ ಕುಮಾರ್ ಇದು ಸರ್ಕಾರದ ದಮನಕಾರಿ ನೀತಿಯ ಸಂಕೇತ ಎಂದು ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಸಮರ್ಥನೆ
ಪತ್ರಕರ್ತರ ನಿಯೋಗದಿಂದ ಮನವಿಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ನಾನೇ ಹೇಳಿ ಆದೇಶ ಮಾಡಿಸಿದ್ದೇನೆ, ಇದು ಸಂಪೂರ್ಣ ನಿರ್ಬಂಧವಲ್ಲ ಬದಲಾಗಿ ‘ರೀಸನೇಬಲ್ ರಿಸ್ಟ್ರಿಕ್ಷನ್’ (ಸಮಂಜಸವಾದ ಮಿತಿ) ಮಾತ್ರ ಎಂದರು. ಸ್ವಾತಂತ್ರ್ಯ ಎನ್ನುವುದು ಸ್ಟೇಚ್ಛೆಯಾಗಬಾರದು, ಕಂಡ ಕಂಡಲ್ಲಿ ಬಂದು ತೊಂದರೆ ಕೊಡುವುದನ್ನು ಬಿಟ್ಟು ನಾವು ಕರೆದಾಗ ಬಂದರೆ ಸಾಕು ಎಂದು ಹೇಳಿದ ಸಿಎಂ, ಸದ್ಯಕ್ಕೆ ಆದೇಶ ಹಿಂಪಡೆಯುವುದಿಲ್ಲ ಎಂದು ಕಡಾಖಂಡಿತವಾಗಿ ತಿಳಿಸಿದರು.
ವಿಧಾನಸೌಧವು ಜನಪ್ರತಿನಿಧಿಗಳು ಜನರ ಪರವಾಗಿ ಚರ್ಚೆ ನಡೆಸುವ ಪವಿತ್ರ ಸ್ಥಳ. ಅಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಪಾರದರ್ಶಕತೆಯ ಮೇಲೆ ಹೊಡೆತ ನೀಡಿದಂತಾಗಿದೆ. ಈ ಕ್ರಮವು ಅಭಿವ್ಯಕ್ತಿಯ ಸ್ವಾತಂತ್ರ್ಯ, ಮಾಹಿತಿ ಹಕ್ಕಿನ ಮೇಲಿನ ಹಸ್ತಕ್ಷೇಪವಾಗಿ ಕಾಣುತ್ತದೆ.
- ಪ್ರತಾಪ್ ಸಿಂಹ ಮಾಜಿ ಸಂಸದ
ಭ್ರಷ್ಟಾಚಾರದಲ್ಲಿ ಮುಳಗಿರುವ ಸರ್ಕಾರ ಬಡವರು, ಮಧ್ಯಮ ವರ್ಗದ ಜೀವ ಹಿಂಡುತ್ತಿರುವುದರ ಜತೆಗೆ ಈಗ ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ.
- ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ













































