ರಾಜ್ಯ ಪೊಲೀಸ್‌ ಹುದ್ದೆಗಳಲ್ಲಿ ಅಗ್ನಿವೀರರಿಗೆ ಶೇ.20ಮೀಸಲು: ಸರ್ಕಾರ ಪರಿಶೀಲನೆ

Picture of Savistara

Savistara

Bureau Report

ಬೆಂಗಳೂರು: ರಾಜ್ಯ ಗೃಹ ಇಲಾಖೆಯಿಂದ ನಡೆಯುವ ವಿವಿಧನೇಮಕಾತಿಗಳ ಸಂದರ್ಭದಲ್ಲಿ, ಭಾರತೀಯ ಸೇನೆಯ ಅಗ್ನಿವೀರ ಯೋಜನೆಯನ್ನು ಪೂರ್ಣಗೊಳಿಸಿರುವವರಿಗೆ ಶೇ.20ರವರೆಗೆ ಮೀಸಲಾತಿ ನೀಡುವ ಕುರಿತು ಕರ್ನಾಟಕ ಸರ್ಕಾರ ಆಲೋಚನೆ ಮಾಡುತ್ತಿದೆ.ಈ ಕುರಿತು ಕೇಂದ್ರ ಗೃಹ ಇಲಾಖೆಯು ರಾಜ್ಯ ಪೊಲೀಸ್ ಇಲಾಖೆಗೆ ಮಾರ್ಚ್ 13ರಂದು ಪತ್ರ ಬರೆದಿದೆ. ಈ ಪತ್ರವನ್ನು ಉಲ್ಲೇಖಿಸಿ ಪೊಲೀಸ್ ನೇಮಕಾತಿ ಮಹಾನಿರ್ದೇಶಕರು ಹಾಗೂ ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಡಿಐಜಿ (ಆಡಳಿತ) ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಏಪ್ರಿಲ್ 17ರಂದು ಪತ್ರ ಬರೆದಿದ್ದಾರೆ. ಸಶಸ್ತ್ರ ಪೊಲೀಸ್, ಜೈಲು ವಾರ್ಡರ್, ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಹಾಗೂ ವಿಪತ್ತು ಪ್ರತಿಕ್ರಿಯೆ ಪಡೆಯಲ್ಲಿ ನೇಮಕಾತಿ ವೇಳೆ ಮಾಜಿ ಅಗ್ನಿವೀರರಿಗೆ ಕನಿಷ್ಠ ಶೇ.20 ಮೀಸಲಾತಿ ನೀಡುವ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.ಅಗ್ನಿವೀರ ಯೋಜನೆಯು ಭಾರತೀಯ ಸೇನೆಯಲ್ಲಿದ್ದು ನೇಮಕವಾದ ಅಭ್ಯರ್ಥಿಗಳು 4 ವರ್ಷದ ಸೇವೆ ನಂತರ ನಿವೃತ್ತರಾಗಲಿದ್ದಾರೆ. ಕೆಲವರನ್ನು ಭಾರತೀಯ ಸೇನೆಯು ಸೈನಿಕರಾಗಿ ನೇಮಕ ಮಾಡಲಿದ್ದು, ಉಳಿದವರು ನಿವೃತ್ತರಾಗುತ್ತಾರೆ. ಈ ಯೋಜನೆಯಲ್ಲಿ ನೇಮಕಗೊಂಡ ಮೊದಲ ಬ್ಯಾಚ್ 2027ರಲ್ಲಿ ನಿವೃತ್ತವಾಗಲಿದೆ.

ಕೇಂದ್ರ ಸರ್ಕಾರದ ಪತ್ರ:

ಅಗ್ನಿವೀರರಿಗೆ ಸಾಕಷ್ಟು ತರಬೇತಿ ನೀಡಲಾಗಿರುತ್ತದೆ, ವೃತ್ತಿಯ ಅನುಭವವೂ ಇರುತ್ತದೆ. ಅವರು ನಿವೃತ್ತಿ ನಂತರ ಪೊಲೀಸ್ ಸೇರಿ ಇತರ ಸೇವೆಗಳಿಗೆ ನೇಮಿಸಿಕೊಂಡರೆ ಅವರ ಅನುಭವದ ಲಾಭಪಡೆಯಬಹುದು ಹಾಗೂ ಹೆಚ್ಚೆಚ್ಚು ಯುವಕರನ್ನು ಅಗ್ನಿವೀರ ಯೋಜನೆಗೆ ಆಕರ್ಷಿಸಬಹುದು ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ.ಈ ಕುರಿತು ಮಾರ್ಚ್‌ನಲ್ಲಿ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ, ಫಾರೆಸ್ಟ್ ಗಾರ್ಡ್, ಮೈನಿಂಗ್ ಗಾರ್ಡ್, ಪೊಲೀಸ್ ಕಾನ್ಸ್‌ಟೇಬಲ್, ಫೈರ್‌ಮೆನ್, ಮೌಂಟೆಡ್ ಪೊಲೀಸ್, ಜೈಲು ವಾರ್ಡನ್, ವಿಶೇಷ ಪೊಲೀಸ್‌ ಅಧಿಕಾರಿಗಳು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯಲ್ಲಿ ಶೇ.20 ಹುದ್ದೆಗಳನ್ನು ಅಗ್ನಿವೀರರಿಗೆ ಮೀಸಲಿಡುವ ಕುರಿತು ಪರಿಶೀಲಿಸುವಂತೆ ಪತ್ರ ಬರೆದಿದ್ದರು.

ಮಾಜಿ ಅಗ್ನಿವೀರರಿಗೆ ಪೊಲೀಸ್ ಮೀಸಲಾತಿ: ಆಕಾಂಕ್ಷಿಗಳಲ್ಲಿ ಆತಂಕ

ಬೆಂಗಳೂರು: ರಾಜ್ಯ ಗೃಹ ಇಲಾಖೆಯಿಂದ ನಡೆಯುವ ವಿವಿಧ ನೇಮಕಾತಿಗಳಲ್ಲಿ ಮಾಜಿ ಅಗ್ನಿವೀರರಿಗೆ ಶೇ.20 ಮೀಸಲು ನೀಡುವ ಕುರಿತು ಕರ್ನಾಟಕ ಸರಕಾರ ಚರ್ಚೆ ನಡೆಸುತ್ತಿರುವುದು, ಪೊಲೀಸ್‌ ಆಗಬೇಕೆಂದು ಪ್ರಯತ್ನಿಸುತ್ತಿರುವ ಆಕಾಂಕ್ಷಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಸಶಸ್ತ್ರ ಪೊಲೀಸ್, ಜೈಲು ವಾರ್ಡರ್, ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ) ಹಾಗೂ ವಿಪತ್ತು ಪ್ರತಿಕ್ರಿಯೆ ಪಡೆಯಲ್ಲಿ ನೇಮಕಾತಿ ವೇಳೆ ಮಾಜಿ ಅಗ್ನಿವೀರರಿಗೆ ಶೇ.20 ಮೀಸಲಾತಿ ಕಲ್ಪಿಸುವ ಕುರಿತು ಡಿಐಜಿ (ಆಡಳಿತ) ಕಚೇರಿಯು ಪೊಲೀಸ್‌ ನೇಮಕಾತಿ ಮಹಾನಿರ್ದೇಶಕರು ಹಾಗೂ ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಸರಕಾರದ ಹಂತದಲ್ಲಿ ಚರ್ಚೆಯಲ್ಲಿದೆ.ಈಗಾಗಲೆ ಪೊಲೀಸ್ ಇಲಾಖೆಯಲ್ಲಿ ಶೇ.25 ಮಹಿಳಾ ಮೀಸಲಾತಿ, ಶೇ.10 ಸೇವಾನಿರತರ ಮೀಸಲಾತಿ, ಶೇ.5 ಮಾಜಿ ಸೈನಿಕರ ಮೀಸಲಾತಿ, ಶೇ.3 ಯೋಜನಾ ನಿರಾಶ್ರಿತರಿಗೆ ಮೀಸಲಾತಿ, ಶೇ.3 ಕ್ರೀಡಾ ಮೀಸಲಾತಿ, ಶೇ.2 ತೃತೀಯ ಲಿಂಗಿಗಳ ಮೀಸಲಾತಿ ಸೇರಿ ಮೀಸಲಾತಿಯು ಅಂದಾಜು ಶೇ.50ರಷ್ಟಿದೆ. ಈಗ ಮಾಜಿ ಅಗ್ನಿವೀರರ ಮೀಸಲಾತಿಯನ್ನೂ ಸೇರಿಸಿದರೆ ಶೇ.70ರಷ್ಟು ಮೀಸಲಾತಿ ಮೂಲಕ ಭರ್ತಿಯಾಗಿ, ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ ಕ್ಷೀಣಿಸುತ್ತದೆ ಎಂದಿದ್ದಾರೆ.

[t4b-ticker]
error: Content is protected !!