ಭಾಗವತ ಮತ್ತು ಭಗವದ್ಗೀತೆಯ ನಾಯಕ ಶ್ರೀಕೃಷ್ಣನ ಬಗ್ಗೆ ಅಪಾರ ಗೌರವ ಹಾಗೂ ವಿಶಿಷ್ಟ ದೃಷ್ಟಿಕೋನ ಹೊಂದಿದ್ದ ಆಧ್ಯಾತ್ಮಿಕ ಚಿಂತಕ ಓಶೋ ರಜನೀಶ್, ತಮ್ಮ ‘ಕೃಷ್ಣ: ದಿ ಮ್ಯಾನ್ ಆಂಡ್ ಹಿಸ್ ಫಿಲಾಸಫಿ’ ಕೃತಿಯಲ್ಲಿ ಶ್ರೀಕೃಷ್ಣನನ್ನು ಇತಿಹಾಸದ ಅತ್ಯಂತ ಪರಿಪೂರ್ಣ ಹಾಗೂ ಬಹುಆಯಾಮದ ವ್ಯಕ್ತಿತ್ವ ಎಂದು ಬಣ್ಣಿಸಿದ್ದಾರೆ.ಓಶೋ ಪ್ರಕಾರ, ಕೃಷ್ಣನಿಗೆ ಕೊಳಲು ನುಡಿಸಲು ಮತ್ತು ನೃತ್ಯ ಮಾಡಲು ಎಷ್ಟು ಚನ್ನಾಗಿ ಗೊತ್ತಿತ್ತೋ, ರಣರಂಗದಲ್ಲಿ ಸುದರ್ಶನ ಚಕ್ರ ಹಿಡಿದು ಹೋರಾಡುವುದೂ ಅಷ್ಟೇ ಪ್ರವೀಣತೆಯಿಂದ ಗೊತ್ತಿತ್ತು.
ಗೋಪಿಕೆಯರೊಂದಿಗೆ ಲೀಲೆಗಳನ್ನಾಡಿದ ಕೃಷ್ಣನೇ ಜಗತ್ತಿಗೆ ಅತ್ಯುನ್ನತ ಭಗವದ್ಗೀತೆಯ ಜ್ಞಾನವನ್ನು ಬೋಧಿಸಿದನು. ಈ ಎಲ್ಲ ವಿರೋಧಾಭಾಸಗಳ ನಡುವೆಯೂ ಆತ ಅಪೂರ್ವ ಸಮತೋಲನವನ್ನು ಕಾಯ್ದುಕೊಂಡಿದ್ದನು. ಮನುಷ್ಯರು ಜೀವನವನ್ನು ತೀವ್ರ ಗಂಭೀರವಾಗಿ ತೆಗೆದುಕೊಂಡು ದುಃಖ ಅನುಭವಿಸುತ್ತಾರೆ; ಆದರೆ ಕೃಷ್ಣನು ಅದನ್ನು ಯಾವುದೇ ಅಂಟಿಕೊಳ್ಳುವಿಕೆ ಇಲ್ಲದೆ, ನಗುತ್ತಾ ಒಂದು ‘ಲೀಲೆ’ಯಾಗಿ ಸ್ವೀಕರಿಸಿದನು.
ಕೃಷ್ಣನ ವ್ಯಕ್ತಿತ್ವವು ವರ್ತಮಾನಕ್ಕಿಂತ ಭವಿಷ್ಯದ ಮಾನವಕುಲಕ್ಕೆ ಹೆಚ್ಚು ಹತ್ತಿರವಾಗಿದೆ. ಜೀವನದ ಹೂವು-ಮುಳ್ಳು, ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ರಾಜಕಾರಣ ಹಾಗೂ ಯುದ್ಧದ ಮಧ್ಯೆಯೂ ಕಮಲದೆಲೆಯ ಮೇಲಿನ ನೀರಿನಂತೆ ಬದುಕಿದ ಕೃಷ್ಣನ ನೈತಿಕತೆ ಮನುಷ್ಯನ ಸಾಂಪ್ರದಾಯಿಕ ಬುದ್ಧಿವಂತಿಕೆಗೆ ಎಂದಿಗೂ ರಹಸ್ಯವಾಗಿಯೇ ಉಳಿದಿದೆ.
ಶ್ರೀಕೃಷ್ಣನ ಪ್ರಮುಖ ಗೀತಾ ಸಂದೇಶಗಳು:
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ: ಕರ್ತವ್ಯವನ್ನು ಮಾತ್ರ ಮಾಡು, ಫಲದ ಅಪೇಕ್ಷೆ ಬೇಡ.
ಯೋಗಃ ಕರ್ಮಸು ಕೌಶಲಂ: ಕೆಲಸವನ್ನು ಅತ್ಯಂತ ನಿಪುಣತೆ ಹಾಗೂ ಸಮರ್ಪಣೆಯಿಂದ ಮಾಡುವುದೇ ಯೋಗ.
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ: ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರವಾದದ್ದು ಬೇರೊಂದಿಲ್ಲ.
ಆತ್ಮನೈವಾತ್ಮನಾ ಬಂಧುಃ ಆತ್ಮೈವ ರಿಪುರಾತ್ಮನಃ: ನಿನ್ನ ಉದ್ಧಾರ ಹಾಗೂ ವಿನಾಶಕ್ಕೆ ನೀನೇ ಕಾರಣ; ನಿನಗೆ ನೀನೇ ಮಿತ್ರ, ನೀನೇ ಶತ್ರು.
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ: ಕೋಪದಿಂದ ಅಜ್ಞಾನ ಹಾಗೂ ಬುದ್ಧಿನಾಶ ಉಂಟಾಗುತ್ತದೆ.

















































