ಬೆಂಗಳೂರು: ‘ಕೆಪಿಎಸ್ಸಿ ಹಗರಣದ ರೂವಾರಿಗಳು ಬಿಜೆಪಿಯ ಗರ್ಭಗುಡಿಯಲ್ಲಿ ಬೆಳೆದವರು’ ಎಂದು ಸಚಿವ ಶಿವರಾಜ ತಂಗಡಗಿ ದೂರಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಕೆಪಿಎಸ್ಸಿ ಹಗರಣದ ರೂವಾರಿಗಳು ಎಂಬ ಆರೋಪಕ್ಕೆ ಗುರಿಯಾಗಿರುವ ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಫೋಟೊಗಳನ್ನು ದೇವರು ಎಂಬಂತೆ ಇಟ್ಟುಕೊಂಡಿದ್ದಾರೆ. ಈ ವಿಚಾರವನ್ನು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಹಿರಂಗಪಡಿಸಿದ್ದಾರೆ’ ಎಂದು ಹೇಳಿದ್ದಾರೆ.’ಈಗ ಸಿಕ್ಕಿಬಿದ್ದಿರುವ ಅಸಲಿ ಕಿಂಗ್ ಪಿನ್ ಬಸವರಾಜ ಕನ್ನಾಳೆ ಹಾಗೂ ಕಮಲ ನಾಯಕರ ನಡುವಿನ ಕನೆಕ್ಷನ್ಗಳ ಬಗ್ಗೆ ತಿಳಿಸಿದರೆ ಗಾಬರಿಯಾಗುತ್ತದೆ. ಇಂತಹ ಭ್ರಷ್ಟ, ನೇಮಕ ಪ್ರಕ್ರಿಯೆ ಅಕ್ರಮಗಳ ರೂವಾರಿ ಕನ್ನಾಳೆ ಅವರನ್ನು ತುಮಕೂರು ಸಿಂಡಿಕೇಟ್ ಸದಸ್ಯರಾಗಿ ನೇಮಿಸಲು ಶಿಫಾರಸು ಮಾಡಿದವರು ಯಾರು ಎಂಬುದು ಜಗಜ್ಜಾಹೀರು’ ಎಂದಿದ್ದಾರೆ.`ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಈತ ಸ್ವಂತ ತಮ್ಮನಿಗಿಂತ ಹೆಚ್ಚು. ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ, ವಿ. ಸೋಮಣ್ಣ ಅವರು ತಬ್ಬಾಡುವಷ್ಟು ಆಪ್ತರು. ವಿಧಾನಸಭೆ ಪ್ರತಿಪಕ್ಷ ನಾಯಕರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸೇರಿ ಹಲವು ನಾಯಕರು ಜೊತೆಯಲ್ಲಿ ಫಾರಿನ್ ಟೂರ್ ಹೊಡೆಯುವಷ್ಟು ಗಳಸ್ಯ-ಕಂಠಸ್ಯ’ ಎಂದು ಆರೋಪಿಸಿದ್ದಾರೆ.
ಮುಂದುವರಿದು, ಇದೇ ಕಿಂಗ್ ಪಿನ್ ಕನ್ನಾಳೆಯನ್ನು ಬಿಜೆಪಿ ನಾಯಕರು ಬಾಲ್ಕಿ ಕ್ಷೇತ್ರದ ಅಭ್ಯರ್ಥಿ ಮಾಡಲು ಹೊರಟಿದ್ದರು. ತನ್ಮೂಲಕ ಕನ್ನಾಳೆ ಕನ್ನದ ಕೈಗಳ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗ ಆಗಿದೆ’ ಎಂದು ಹೇಳಿದ್ದಾರೆ.’ಸಾರ್ವಜನಿಕ ಬದುಕಿನಲ್ಲಿ ನಾಯಕರ ಜೊತೆ ಫೋಟೊಗಳು ಸಹಜ. ಆದರೆ ಬಿಜೆಪಿ ನಾಯಕರ ಜೊತೆಗಿನ ಫೋಟೊಗಳಲ್ಲಿನ ಆಪ್ತತೆಯ ಆಚೆಗಿನ ಸಂಬಂಧಗಳ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.’ಬಂಧಿತ ಆರೋಪಿಯು ಬಿಜೆಪಿಯ ಯಾವ ಮಾಜಿ ಸಚಿವರ ಬೇನಾಮಿ ಎಂಬುದು ಬಹಿರಂಗವಾಗಬೇಕು. ಹಗರಣದ ಹಣದ ಹಾದಿ ಎಲ್ಲಿಂದ ಆರಂಭವಾಗಿ ಯಾರ್ಯಾರ ಬಳಿಗೆ ತಲುಪಿದೆ? ಈ ಹಗರಣದ ಪ್ರಮುಖ ಕಿಂಗ್ ಪಿನ್ ಇವರು ಮಾತ್ರವೇ ಇವರ ಹಿಂದೆ ಪ್ರಭಾವಿಗಳು ಯಾರಾದರೂ ಇದ್ದಾರಾ? ತನಿಖೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

















































