ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಾವನ ಸನ್ನಿಧಿ, ಸಮಾನತೆ ಮತ್ತು ಸಂಸ್ಕೃತಿಯ ಸಂಗಮ ಕ್ಷೇತ್ರವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11 ರಿಂದ 21 ರವರೆಗೆ ನಡೆಯಲಿರುವ ಐತಿಹಾಸಿಕ ‘ಮಂಗಳೂರು ದಸರಾ ಮಹೋತ್ಸವ’ದ ಉದ್ಘಾಟನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಕ್ಷೇತ್ರಾಡಳಿತ ಸಮಿತಿಯ ವತಿಯಿಂದಆಹ್ವಾನಿಸಲಾಯಿತು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜೈರಾಜ್ ಹೆಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್, ಲೀಲಾಕ್ಷ ಕರ್ಕೇರ, ಸೂರ್ಯಕಾಂತ್ ಜೆ. ಸುವರ್ಣ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷರಾದ ಪ್ರಭಾಕರ ಬಂಗೇರ, ಕೋಶಾಧಿಕಾರಿ ಯೋಗೀಶ್ ಕುಮಾರ್ ಮೂಲ್ಕಿ,ಕಾರವಾರದ ನ್ಯಾಯವಾದಿ ಜಿ.ಟಿ.ನಾಯ್ಕ ಉಪಸ್ಥಿತರಿದ್ದು, ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.
ಕರಾವಳಿಯ ಸಾಂಸ್ಕೃತಿಕ ಗರಿಮೆ ಮತ್ತು ನವದುರ್ಗೆಯರ ಮಹೋತ್ಸವದ ಹಿರಿಮೆಯನ್ನು ಪ್ರೀತಿಯಿಂದ ಆಲಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರು, “ಕುದ್ರೋಳಿ ಕ್ಷೇತ್ರಕ್ಕೆ ಬರುವುದೇ ಒಂದು ವಿಶೇಷ ಅನುಭವ. ನಾರಾಯಣ ಗುರುಗಳ ಉನ್ನತ ಆಶಯಗಳು ಹಾಗೂ ಕರಾವಳಿಯ ಜನತೆಯ ಸಂಸ್ಕೃತಿಯ ಸಂಕೇತವಾಗಿರುವ ಈ ಮಹೋತ್ಸವದಲ್ಲಿ ಭಾಗಿಯಾಗುವುದು ನನಗೆ ಹೆಮ್ಮೆಯ ವಿಷಯ,” ಎಂದು ಸಂತಸ ವ್ಯಕ್ತಪಡಿಸಿದರು.

















































