ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಯುವಕ ಕಲುಷಿತಗೊಂಡಿದ್ದ ಅಜ್ಜಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಈ ಯುವಕನ ಪರಿಸರ ಕಾಳಜಿಗೆ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಲಕ್ಷಾಂತರ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಜ್ಜಾರ್ ನದಿ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿ ಹಾಗೂ ಪಾಚಿಯಿಂದ ಕಲುಷಿತಗೊಂಡಿತ್ತು. ನದಿಯ ಈ ಸ್ಥಿತಿ ಕಂಡು ಮರುಗಿದ ಯುವಕ ತಾನೇ ನೀರಿಗಿಳಿದು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದ. ಅಲ್ಲಿ ಯಾವುದೇ ಸರ್ಕಾರಿ ನೌಕರರಾಗಲಿ, ಯಂತ್ರಗಳಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ಇರಲಿಲ್ಲ. ಇದ್ದದ್ದು ಒಬ್ಬನೇ ಯುವಕ ಮತ್ತು ಆತನ ದೃಢ ನಿರ್ಧಾರ.
ಇಂದು ಸಾಮಾಜಿಕ ಮಾಧ್ಯಮದಲ್ಲಿ ‘ಬಿಟ್ಟು ತಬಾಹಿ’ ಎಂದೇ ಖ್ಯಾತಿ ಪಡೆದುಕೊಂಡಿರುವ ಬಿಎಸ್ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ನದಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದ ಸಮಾಜದ ಮನಸ್ಥಿತಿಯನ್ನೇ ಅಳಿಸಿ ಹಾಕಲು ಪಣತೊಟ್ಟ.
ಬರಿಗೈನಲ್ಲಿ ಶುರುವಾದ ನದಿ ಶುದ್ದೀಕರಣ ಅಭಿಯಾನ..
ಕಸ ತೆರವುಗೊಳಿಸುವ ಆರಂಭದಲ್ಲಿ ಯಂತ್ರವೊಂದನ್ನು ತರಲು ಬಯಸಿದ್ದ ಸುರೇಂದ್ರ, ಹಣದ ಅಭಾವದಿಂದಾಗಿ ತಮ್ಮ ಬರಿಗೈಗಳನ್ನೇ ನಂಬಿ ನದಿಗಿಳಿದರು. ಆ ನದಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿದ್ದಲ್ಲದೆ, ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಆರಂಭಿಸಿದರು. ಸುಮಾರು ₹30 ಸಾವಿರ ಖರ್ಚು ಮಾಡಿ ಉಪಕರಣ ಹಾಗೂ ಕಸದ ಬುಟ್ಟಿಗಳನ್ನು ಖರೀದಿಸಿದರು.ನಿರಂತರ ಕೊಳಚೆ ನೀರಿನಿಂದ ಆತನ ಕೈ -ಕಾಲುಗಳಿಗೆ ಸೋಂಕು ತಗುಲಿತ್ತು. ಆದರೂ ಲೆಕ್ಕಿಸದೆ ತಿಂಗಳುಗಟ್ಟಲೆ ಸುರೇಂದ್ರ ಶ್ರಮಿಸಿದರು. ಅಷ್ಟೇ ಅಲ್ಲದೇ ಈ ಕೆಲಸದ ವೇಳೆ ಹಾವುಗಳಿಂದ ಪಾರಾಗುವ ಪರಿಸ್ಥಿತಿ ಎದುರಿಸಬೇಕಾಯಿತು.
ಇನ್ನು ಸುರೇಂದ್ರ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಛತಾ ಕಾರ್ಯದ ವಿಡಿಯೊಗಳನ್ನು ಹಂಚಿಕೊಂಡಾಗ ಹಲವರು ‘ಕೇವಲ ಹೆಚ್ಚು ವೀಕ್ಷಣೆ ಪಡೆಯಲು ನಾಟಕ ಮಾಡುತ್ತಿದ್ದಾನೆ’, ‘ಹುಚ್ಚ’ ಎಂದು ಹೀಯಾಳಿಸಿದ್ದರು. ಆದರೆ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಸುರೇಂದ್ರ, ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ ನದಿಗೆ ಮರುಜೀವ ನೀಡಿದ್ದನ್ನು ಹಂಚಿಕೊಂಡಿದ್ದರು.ಇದೀಗ ಸುರೇಂದ್ರ ಅವರ ಈ ನಿಸ್ವಾರ್ಥದ ಕೆಲಸಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ನಟಿ ಚಿತ್ರಾಂಗದಾ ಸಿಂಗ್ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೆಲ ನೆಟ್ಟಿಗರು, ‘ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು’, ’20 ವರ್ಷದ ವಿದ್ಯಾರ್ಥಿಯೊಬ್ಬ ಬರಿಗೈನಲ್ಲಿ ಬಳಸಿ ಏಕೆ ಬರಬೇಕು’?, ‘ಆಡಳಿತ ಮಂಡಳಿ ಯಂತ್ರವನ್ನು ಬಳಿಸಿ ಶಾಶ್ವತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮಾಡಬೇಡವೇ’ ಎಂದು ಪ್ರಶ್ನೆ ಎತ್ತುತ್ತಿದ್ದಾರೆ.

















































