ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಮೆಯ ಭಕ್ತರೆಲ್ಲರೂ ಒಂದಾಗಿ ಕ್ಷೇತ್ರ ಸಾನಿಧ್ಯ ವೃದ್ಧಿಗಾಗಿ ಶತರುದ್ರಾಭಿಷೇಕ ಹಾಗೂ ಮಹಾ ಸೀಯಾಳ ಅಭಿಷೇಕ ಸೇವೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದ್ದಾರೆ.

ದೇವಳದ ಆಡಳಿತ ವ್ಯವಸ್ಥೆಯ ಗೊಂದಲ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ, ಯಾವುದೇ ವ್ಯಕ್ತಿಗತ ಪ್ರಚಾರವಿಲ್ಲದೆ ಕ್ಷೇತ್ರ ಹಿತಕ್ಕಾಗಿ ಭಕ್ತರೇ ಸ್ವಯಂಪ್ರೇರಿತರಾಗಿ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದರು.

1,000 ಸೀಯಾಳಗಳ ಸಂಗ್ರಹದ ಗುರಿ ಹೊಂದಲಾಗಿತ್ತಾದರೂ, ಭಕ್ತರ ಭಕ್ತಿಗೆ ಸಾಕ್ಷಿಯಾಗಿ 5,000ಕ್ಕೂ ಹೆಚ್ಚು ಸೀಯಾಳಗಳು ಸಂಗ್ರಹಗೊಂಡು ಶಿವನಿಗೆ ಮಹಾಭಿಷೇಕ ನೆರವೇರಿತು. ಸಾವಿರಾರು ಭಕ್ತರು ಜಪ-ತಪಗಳಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು.

ಭೋಜನ ಪ್ರಸಾದದ ನಂತರ ಸ್ವಯಂಸೇವಕರೇ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಿ ಸೇವೆಯನ್ನು ಪೂರ್ಣಗೊಳಿಸಿದರು.
















































