ರಾಜ್ಯದ ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಬದಲಾವಣೆ ತಂದಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ (ರೇಷನ್) ಅಂಗಡಿಗಳ ಕಾರ್ಯನಿರ್ವಹಣಾ ವೇಳಾಪಟ್ಟಿಯನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ.
ಅಕ್ಟೋಬರ್ 1 ರಿಂದ ರಾಜ್ಯದ ಎಲ್ಲಾ ರೇಷನ್ ಅಂಗಡಿಗಳು ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:00 ರವರೆಗೆ ಹಾಗೂ ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ತೆರೆದಿರಲಿವೆ. ದಿನವಿಡೀ ಬೆವರು ಸುರಿಸಿ ದುಡಿಯುವ ಆಟೋ ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿ ಶ್ರಮಿಕರು ಪಡಿತರ ಧಾನ್ಯ ಪಡೆಯಲು ತಮ್ಮ ದಿನದ ದುಡಿಮೆಯನ್ನು ತ್ಯಾಗ ಮಾಡಬಾರದು ಮತ್ತು ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿ ಮನೆಗೆ ಮರಳುವಾಗ ತಮಗೆ ಅನುಕೂಲಕರ ವೇಳೆಯಲ್ಲಿ ಗೌರವಯುತವಾಗಿ ಪಡಿತರ ಪಡೆಯಲು ಅನುಕೂಲವಾಗುವಂತೆ ಈ ನೂತನ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ತಿಳಿಸಿದ್ದಾರೆ.
















































