ದಾವಣಗೆರೆ: ‘ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬರ ಪರಿಶೀಲನೆ ನಡೆಸಲು ಯಾವ ತಾಲ್ಲೂಕಿಗೆ ಬಂದಿದ್ದಾರೆ?. ಇದು ಇಂದಿನ ಪರಿಸ್ಥಿತಿಯಲ್ಲ, ಮೊದಲಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿದೆ. ನಾನು ಮಾತನಾಡುವುದರಿಂದ ಏನಾದರೂ ಬದಲಾಗುತ್ತದೆಯೇ? ಅವರು ( ಎಸ್.ಎಸ್.ಮಲ್ಲಿಕಾರ್ಜುನ್) ಯಾವುದಾದರೂ ತಾಲ್ಲೂಕಿಗೆ ಭೇಟಿ ನೀಡುತ್ತಾರೆಯೇ’ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ಗೆ ಈ ಬಗ್ಗೆ ಎಲ್ಲಾ ಮಾಹಿತಿ ಇದೆ. ಆದರೂ ನಡೆದುಕೊಂಡು ಹೋಗುತ್ತಿದೆ. ನಾನು ವಿರೋಧಿಸುವುದರಿಂದ ವೈಮನಸ್ಸು ಉಂಟಾಗುತ್ತದೆಯೇ ಹೊರತು ಬೇರೇನೂ ಆಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.’ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಖುದ್ದು ಮುಖ್ಯಮಂತ್ರಿಯೇ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆಗಳಿಗೆ ಸ್ಪಂದಿಸುವ ಬಗ್ಗೆ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.’ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಜಗಳೂರನ್ನು ಕೈಬಿಟ್ಟಿರುವುದರಿಂದ ಬಿ. ದೇವೇಂದ್ರಪ್ಪ ಅವರಿಗೆ ಸಹಜವಾಗಿಯೇ ನೋವಾಗಿದೆ. ಜಗಳೂರು ಶಾಸಕರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಎರಡನೇ ಹಂತದಲ್ಲಿ ಜಗಳೂರು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಇರಲಿದೆ’ ಎಂದು ಹೇಳಿದರು.
ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಜಗಳೂರು ಕ್ಷೇತ್ರವನ್ನು ಕೈಬಿಟ್ಟಿರುವ ಬಗ್ಗೆ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರು ಎರಡು ದಿನಗಳ ಹಿಂದಷ್ಟೇ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿಜೆಪಿ ವಿರುದ್ಧ ವಾಗ್ದಾಳಿ:’ಬಿ.ನಾಗೇಂದ್ರ ಅವರ ತಪ್ಪಿಲ್ಲ. ಅವರು ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ನಾಯಕರಿಗೆ ಸಮಾಧಾನವಿಲ್ಲ. ರಾಯಚೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು ಅವರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಮಾಡುತ್ತಿರಬಹುದು’ ಎಂದು ಶಾಸಕ ಬಸವರಾಜು ಶಿವಗಂಗಾ ವ್ಯಂಗ್ಯವಾಡಿದರು
















































