ನವದೆಹಲಿ: ದಿಢೀರ್ ಪ್ರವಾಹದಿಂದಾಗಿ ತೀವ್ರ ಹಾನಿಗೊಳಗಾಗಿರುವ ನೆರೆಯ ನೇಪಾಳಕ್ಕೆ ಭಾರತವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಭರವಸೆ ನೀಡಿದ್ದಾರೆ.
ಭಾರತ ಮತ್ತು ನೇಪಾಳ ‘ಸುಖ-ದುಃಖದ ಸಾಥಿ’ (ಕಷ್ಟ-ಸುಖದ ಜೊತೆಗಾರರು) ಎಂದು ಬಣ್ಣಿಸಿರುವ ಅವರು, ನಾಪತ್ತೆಯಾದವರ ಶೋಧ ಕಾರ್ಯ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಾಚರಣೆಗೆ ಭಾರತ ಬದ್ಧವಾಗಿದೆ ಎಂದಿದ್ದಾರೆ.ದೆಹಲಿಯಲ್ಲಿರುವ ನೇಪಾಳ ರಾಯಭಾರ ಕಚೇರಿಗೆ ಸೋಮವಾರ (ಆಗಸ್ಟ್ 31) ಭೇಟಿ ನೀಡಿದ ರಾಜನಾಥ ಸಿಂಗ್, ಸಂತಾಪ ಸೂಚಕ ಪುಸ್ತಕ ಸಹಿ ಮಾಡಿ ಸಂತಾಪವನ್ನು ವ್ಯಕ್ತಪಡಿಸಿದರು.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟ ಕುಟುಂಬಗಳಿಗೆ ಭಾರತ ಸರ್ಕಾರ ಮತ್ತು ದೇಶದ ಪರವಾಗಿ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ದುರಂತವು ನೇಪಾಳಿ ಪ್ರಜೆಗಳ ಜತೆಗೆ ಭಾರತೀಯರು ಸೇರಿದಂತೆ ಅನೇಕ ವಿದೇಶಿ ಪ್ರಜೆಗಳ ಮೇಲೂ ಪರಿಣಾಮ ಬೀರಿದೆ. ಮೃತರ ಕುಟುಂಬಗಳಿಗೆ ನಮ್ಮ ಪ್ರಾರ್ಥನೆಗಳು ಸಲ್ಲುತ್ತವೆ. ‘ಸುಖ-ದುಃಖದಲ್ಲಿ ಜತೆಯಾಗಿ ಭಾರತವು ಯಾವಾಗಲೂ ನೇಪಾಳದ ಜೊತೆ ನಿಂತಿದೆ. ಈ ಕಷ್ಟದ ಸಮಯದಲ್ಲಿಯೂ ನಾವು ನಮ್ಮ ನೇಪಾಳಿ ಸಹೋದರ-ಸಹೋದರಿಯರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ರಕ್ಷಣೆ ಹಾಗೂ ಪುನರ್ವಸತಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ’ ಎಂದು ಸಿಂಗ್ ಪುನರುಚ್ಚರಿಸಿದ್ದಾರೆ.
ನೇಪಾಳದ ಸ್ಥಿತಿ ಭೀಕರ
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ನೇಪಾಳದ ಹಲವಾರು ನಗರಗಳು ಹಾಗೂ ಹಳ್ಳಿಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.
ದುರಂತ ಸಂಭವಿಸಿದ ತಕ್ಷಣದಿಂದಲೇ ಭಾರತ ಸರ್ಕಾರವು ನೇಪಾಳಕ್ಕೆ ನೆರವಿನ ಹಸ್ತ ಚಾಚಿದೆ. ಈಗಾಗಲೇ ಹಲವು ಹಂತಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಸಂತ್ರಸ್ತರ ಡಿಎನ್ಎ ಮಾದರಿ ವಿಶ್ಲೇಷಣೆ ಮತ್ತು ಮೃತರ ಗುರುತು ಪತ್ತೆಗೆ ಸಹಾಯ ಮಾಡಲು 19 ಸದಸ್ಯರ ವಿಶೇಷ ವಿಧಿವಿಜ್ಞಾನ ತಂಡವನ್ನು ನೇಪಾಳಕ್ಕೆ ಕಳುಹಿಸಲಾಗಿದೆ.
















































