ರಾಷ್ಟ್ರವ್ಯಾಪಿ ಚಳುವಳಿಗೆ ಸಿದ್ಧರಾಗುತ್ತಿದ್ದೇವೆ; ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಘೋಷಣೆ!

Picture of Savistara

Savistara

Bureau Report

ಲೋಕಸಭೆಯಲ್ಲಿ ಇಂದು (ಏ.2-ಬುಧವಾರ) ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಆದರೆ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB), “ಸಂಸತ್ತಿನಲ್ಲಿ ಒಂದು ವೇಳೆ ಈ ಮಸೂದೆ ಜಾರಿಯಾದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು..ʼ ಎಂದು ಹೇಳಿದೆ. ಅಲ್ಲದೇ ಈ ಮಸೂದೆಯು ಕಾನೂನಾಗಿ ಜಾರಿಯಾಗುವುದನ್ನು ತಡೆಯಲು, ಕಾನೂನಾತ್ಮಕ ಹೋರಾಟ ಆರಂಭಿಸುವುದಾಗಿಯೂ AIMPLB ತಿಳಿಸಿದೆ. ಮುಸ್ಲಿಮರ ಹಕ್ಕುಗಳ ರಕ್ಷಣೆಗೆ AIMPLB ಬದ್ಧ ಎಂದು ವಕ್ತಾರ ಡಾ. ಸೈಯದ್ ಖಾಸಿಂ ರಸೂಲ್ ಇಲಿಯಾಸ್ ಹೇಳಿದ್ದಾರೆ.

ಹೊಸದಿಲ್ಲಿ: ಲೋಕಸಭೆಯಲ್ಲಿ ಇಂದು (ಏ.2-ಬುಧವಾರ) ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು, ಲೋಕಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದು, ಲೋಕಸಭೆಯಲ್ಲಿ ಅಂಗೀಕಾರವಾಗುವ ಸಾಧ್ಯತೆ ದಟ್ಟವಾಗಿದೆ.

ಈ ಮಧ್ಯೆ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿರುವ ಅಖಿಲ್‌ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB), “ಒಂದು ವೇಳೆ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ರಾಷ್ಟ್ರವ್ಯಾಪಿ ಚಳುವಳಿ ನಡೆಸುವುದಾಗಿ ಘೋಷಿಸಿದೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ AIMPLB ವಕ್ತಾರ ಡಾ. ಸೈಯದ್ ಖಾಸಿಂ ರಸೂಲ್ ಇಲಿಯಾಸ್, “ಒಂದು ವೇಳೆ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡರೆ, ನಾವು ರಾಷ್ಟ್ರವ್ಯಾಪಿ ಚಳುವಳಿಯನ್ನು ಪ್ರಾರಂಭಿಸುತ್ತೇವೆ..” ಎಂದು ಸ್ಪಷ್ಟಪಡಿಸಿದ್ದಾರೆ.

“ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪ್ರಸ್ತುತ ರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ಮುಸ್ಲಿಮರ ಸಂವಿಧಾನಬದ್ಧ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ. ಹೀಗಾಗಿ ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ದೇಶವ್ಯಾಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತೇವೆ..” ಎಂದು ಡಾ. ಸೈಯದ್ ಖಾಸಿಂ ರಸೂಲ್ ಇಲಿಯಾಸ್ ತಿಳಿಸಿದರು.

“ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಸಂಸತ್ತಿನ ಅಂಗೀಕಾರವಾದರೆ ಅದೇ ಅಂತಿಮವಲ್ಲ. ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ನಮಗೆ ಲಭ್ಯವಿರುವ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ನಾವು ಬಳಸಿಕೊಳ್ಳುತ್ತೇವೆ. ಪ್ರಸ್ತಾವಿತ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯುವವರೆಗೆ ನಾವು ಶಾಂತಿಯುತ ಆಂದೋಲನವನ್ನು ನಡೆಸುತ್ತೇವೆ..” ಎಂದು ಡಾ. ಸೈಯದ್ ಖಾಸಿಂ ರಸೂಲ್ ಇಲಿಯಾಸ್ ಹೇಳಿದರು.

“ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡುವ ಕೇಂದ್ರ ಸರ್ಕಾರದ ಉದ್ದೇಶ ಪ್ರಶ್ನಾರ್ಹವಾಗಿದೆ. ಇದು ಮುಸ್ಲಿಮರ ಆಸ್ತಿ ಕಿತ್ತುಕೊಳ್ಳುವ ಹುನ್ನಾರದಂತೆ ಕಾಣುತ್ತಿದೆ. ವಕ್ಫ್‌ ಮಂಡಳಿ ಮೇಲಿನ ನಿಯಂತ್ರಣಕ್ಕೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳೇ ಸಾಕಾಗುತ್ತವೆ. ಆದಗ್ಯೂ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರ ಸದಸ್ಯರ ನೇಮಕ ಒಂದು ಅನಗತ್ಯ ಗೊಂದಲವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದಂತಿದೆ..” ಎಂದು ಡಾ. ಸೈಯದ್ ಖಾಸಿಂ ರಸೂಲ್ ಇಲಿಯಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಲೋಕಸಭೆಯಲ್ಲಿ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಯಾಗುತ್ತಿದ್ದಂತೇ, ತೀವ್ರ ಗದ್ದಲ ಶುರುವಾಯಿತು. ಪ್ರತಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದವು. “ಪ್ರಸ್ತುತ ತಿದ್ದುಪಡಿ ಮಸೂದೆಯು ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಆ ಧರ್ಮದ ಅನುಯಾಯಿಗಳ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ..” ಎಂದು ಪ್ರತಿಪಕ್ಷಗಳ ಸದಸ್ಯರು ಆರೋಪಿಸಿದರು.

ಆದರೆ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡ ಆಡಳಿತಾರೂಢ ಎನ್‌ಡಿಎ ಸದಸ್ಯರು, “ಈ ಮಸೂದೆ ಧಾರ್ಮಿಕ ಚಟುವಟಿಕೆಗಳನ್ನು ನಿಯಂತ್ರಿಸುವುದಿಲ್ಲ. ಈ ಕಾನೂನನ್ನು ಕೇವಲ ಆಡಳಿತ ಮತ್ತು ಮೇಲ್ವಿಚಾರಣೆಗಾಗಿ ಮಾತ್ರ ಜಾರಿಗೆ ತರಲಾಗುತ್ತಿದೆ..” ಎಂದು ವಾದಿಸಿದರು. ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕಿರಣ್‌ ರಿಜಿಜು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಆಡಳಿತಾರೂಢ ಪಕ್ಷದ ಹಲವು ಪ್ರಮುಖ ಸದಸ್ಯರು, ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಲೋಕಸಭೆಯಲ್ಲಿ ಮಾತನಾಡಿದರು.

[t4b-ticker]
error: Content is protected !!