ಹೊಸದಿಲ್ಲಿ, ಜು. 14: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯ ಹೊಸ ದಿನಾಂಕ ತತ್ಕ್ಷಣ ಪ್ರಕಟಿಸಬೇಕು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರ ಸರಕಾರವನ್ನು ಮಂಗಳವಾರ ಆಗ್ರಹಿಸಿದ್ದಾರೆ.ಥಾಣೆ ಜಿಲ್ಲೆಯಲ್ಲಿ ಟಿಟಿಇ 2026ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿನದ ನಂತರ ಜೂನ್ 27ರಂದು ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 10 ಮಂದಿಯನ್ನು ಬಂಧಿಸಲಾಗಿದೆ.
ಫೇಸ್ಬುಕ್ ಪೋಸ್ಟ್ನಲ್ಲಿ ರಾಹುಲ್ ಗಾಂಧಿ ಅವರು, “ಮಹಾರಾಷ್ಟ್ರ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಮತ್ತು ರದ್ದುಗೊಳಿಸಲಾಗಿದೆ. ಆರು ಲಕ್ಷ ಅಭ್ಯರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಎರಡು ವಾರಗಳು ಕಳೆದಿದ್ದರೂ ಹೊಸ ದಿನಾಂಕದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.ಪ್ರಾಮಾಣಿಕವಾಗಿ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳು ಸಂಕಷ್ಟ ಅನುಭವಿಸುವಂತೆ ಮಾಡಲಾಗುತ್ತಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿರುವವರು ಇನ್ನು ಕೂಡ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಅವರು ಹೇಳಿದರು.”ಕಷ್ಟಪಟ್ಟು ಮತ್ತು ಪ್ರಾಮಾಣಿಕವಾಗಿ ಶ್ರಮಿಸಿದವರೇ ನಮ್ಮ ದೇಶದ ಮುಂದಿನ ಶಿಕ್ಷಕರು. ಭಾರತದ ಭವಿಷ್ಯವನ್ನು ರೂಪಿಸುವವರು ಅವರೇ” ಎಂದು ಅವರು ಹೇಳಿದ್ದಾರೆ.
ಅಭ್ಯರ್ಥಿಗಳು ವರ್ಷಗಟ್ಟಲೆ ತಯಾರಿ ನಡೆಸಿದ್ದರು, ಪರೀಕ್ಷಾ ಶುಲ್ಕ ಪಾವತಿಸಿದ್ದರು ಮತ್ತು ದೂರದ ಕೇಂದ್ರಗಳಿಗೆ ಪ್ರಯಾಣಿಸಿದ್ದರು. ಆದರೆ, ಯಾವುದೇ ಸ್ಪಷ್ಟನೆ ಇಲ್ಲದೆ ಕಾಯುವಂತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.ಮುಖ್ಯಮಂತ್ರಿಗಳೇ (ದೇವೇಂದ್ರ ಫಡ್ನವಿಸ್) ಇಂದು ಮೂರು ವಿಷಯಗಳ ಅಗತ್ಯವಿದೆ. 1. ಕಾಲಮಿತಿ: ಹೊಸ ಟಿಇಟಿ ದಿನಾಂಕವನ್ನು ತತ್ಕ್ಷಣ ಪ್ರಕಟಿಸಿ. 2.ಹೊಣೆಗಾರಿಕೆ: ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಅಭ್ಯರ್ಥಿಗಳ ಮೇಲಲ್ಲ. 3. ಭವಿಷ್ಯದ ರಕ್ಷಣೆ: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಯಾರ ವಯಸ್ಸು ವ್ಯರ್ಥವಾಗಿದೆಯೋ ಅವರಿಗೆ ವಯೋಮಿತಿ ಸಡಿಲಿಕೆ ನೀಡಿ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.









































