ನೀವು ಅತ್ಯಂತ ನಂಬಿಕೆಯಿಂದ ಬಳಸುವ, ನಿಮ್ಮ ಆಪ್ತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ವಾಟ್ಸಾಪ್ ಇನ್ನು ಸುರಕ್ಷಿತವಲ್ಲ! ಡಿಜಿಟಲ್ ಜಗತ್ತಿನ ಕತ್ತಲ ಸಾಮ್ರಾಜ್ಯದ ಚಕ್ರವರ್ತಿಗಳಾದ ಸೈಬರ್ ಖದೀಮರು ಇದೀಗ ನಿಮ್ಮ ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು, ನಿಮ್ಮ ವಾಟ್ಸಾಪ್ ಖಾತೆಯನ್ನೇ ಹೈಜಾಕ್ ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರನ್ನೇ ಲೂಟಿ ಮಾಡುವ ಭೀಕರ ಜಾಲಕ್ಕೆ ಕೈ ಹಾಕಿದ್ದಾರೆ.
ಪುತ್ತೂರು: ನೀವು ಅತ್ಯಂತ ನಂಬಿಕೆಯಿಂದ ಬಳಸುವ,ನಿಮ್ಮ ಆಪ್ತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವ ವಾಟ್ಸಾಪ್ ಇನ್ನು ಸುರಕ್ಷಿತವಲ್ಲ! ಡಿಜಿಟಲ್ ಜಗತ್ತಿನ ಕತ್ತಲ ಸಾಮ್ರಾಜ್ಯದ ಚಕ್ರವರ್ತಿಗಳಾದ ಸೈಬರ್ ಖದೀಮರು ಇದೀಗ ನಿಮ್ಮ ನಂಬಿಕೆಯನ್ನೇ ಅಸ್ತ್ರವಾಗಿಸಿಕೊಂಡು, ನಿಮ್ಮ ವಾಟ್ಸಾಪ್ ಖಾತೆಯನ್ನೇ ಹೈಜಾಕ್ ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರನ್ನೇ ಲೂಟಿ ಮಾಡುವ ಭೀಕರ ಜಾಲಕ್ಕೆ ಕೈ ಹಾಕಿದ್ದಾರೆ.
ಇದರ ಇತ್ತೀಚಿನ ನಿದರ್ಶನ ಪುತ್ತೂರಿನಲ್ಲಿ ನಡೆದಿದೆ. ಪತ್ರಿಕಾ ಸಂಸ್ಥೆಯ ಉದ್ಯೋಗಿಯೊಬ್ಬರು, ಈ ವಂಚನೆಗೆ ಗುರಿಯಾಗಿದ್ದಾರೆ.
ರಾಜ್ಯದ ಪ್ರತಿಷ್ಠಿತ ಪತ್ರಿಕೆಯ ಪುತ್ತೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಯೊಬ್ಬರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್ ಗಳು, ಅವರ ಸಂಪರ್ಕ ಪಟ್ಟಿಯಲ್ಲಿದ್ದ ಆಪ್ತ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ವಂಚಿಸಲು ಯತ್ನಿಸಿದ್ದಾರೆ. ಸದ್ಯ ಲಭಿಸಿರುವ ಮಾಹಿತಿಯ ಪ್ರಕಾರ ಈ ರೀತಿ 10ಕ್ಕೂ ಅಧಿಕ ಮಂದಿಗೆ ಸಂದೇಶ ರವಾನಿಸಿದ್ದಾರೆ.
ವಂಚನೆಯ ಜಾಲ ಹೆಣೆದಿದ್ದು ಹೀಗೆ:
ಪತ್ರಿಕಾ ಉದ್ಯೋಗಿಯ whatsapp ಹ್ಯಾಕ್ ಮಾಡಿ ಅವರದೇ ನಂಬರ್ ನಲ್ಲಿ ಸಂದೇಶ ಕಳುಹಿಸಿದ ವಂಚಕ, ಅರೆಬರೆ ಇಂಗ್ಲಿಷಲ್ಲಿ “ನನ್ನ UPI ಕೆಲಸ ಮಾಡುತ್ತಿಲ್ಲ. ತೀರಾ ತುರ್ತಾಗಿ ₹60,000 ಬೇಕಾಗಿದೆ. ಕೇವಲ ಎರಡು ಗಂಟೆಯೊಳಗೆ ವಾಪಸ್ ಮಾಡುತ್ತೇನೆ” ಎಂದು ಅಂಗಲಾಚಿದ್ದಾನೆ. ಈ ಹಣವನ್ನು ಅವಿನಾಶ್ ಕುಮಾರ್ ಎಂಬ ವ್ಯಕ್ತಿಯ 9241745226 ಸಂಖ್ಯೆಗೆ ಕಳುಹಿಸುವಂತೆ ಸೂಚಿಸಿದ್ದಾನೆ.ಸ್ನೇಹಿತನ ಕಷ್ಟಕ್ಕೆ ಮರುಗಿದರೂ, ಸಂದೇಶದ ಭಾಷೆ ಮತ್ತು ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ಹಾಕಲು ಹೇಳಿದ್ದರಿಂದ ಸಂಶಯಗೊಂಡ ಗೆಳೆಯರು, ಅವರನ್ನು ಸಂಪರ್ಕಿಸಿದ್ದಾರೆ. ಆದರೆ, ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಇದು ವಂಚಕರ ಪೂರ್ವಯೋಜಿತ ತಂತ್ರವಾಗಿತ್ತು. ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದಂತೆ ಮಾಡಿ, ತುರ್ತಿನ ಲಾಭ ಪಡೆಯುವುದೇ ಅವರ ವಂಚನ ಕಾರ್ಯಶೈಲಿ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಆಘಾತಕ್ಕೊಳಗಾದ ತೊಂದರೆಗೆ ಒಳಗಾದ ವ್ಯಕ್ತಿಯೂ, ಕೂಡಲೇ ಪುತ್ತೂರು ನಗರ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂದಾಗಿದ್ದಾರೆ. ಇನ್ನು ವಂಚಕರ ಸಂದೇಶಕ್ಕೆ ಮರುಳಾಗಿ ಯಾರದರೂ ಹಣ ಹಾಕಿ ಮೋಸ ಹೋಗಿದ್ದಾರೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.ವಂಚನೆಗೊಳಗಾದವರಿಗೆ ಪಾರ್ಸೆಲ್ ಇದೆಯೆಂದು ಒಂದು ಕರೆ ಬಂದಿರುತ್ತದೆ. ಅವರು ಕೊಟ್ಟ ನಂಬರ್ ಗೆ ಕರೆ ಮಾಡುವ ಮೊದಲು * # ಬಟನ್ ಗಳನ್ನು ಒತ್ತಲು ಹೇಳಿದ್ದಾರೆ. ಅದರಂತೆ ಕರೆ ಮಾಡಿದಾಗ ಪೂರ್ತಿ ಮೊಬೈಲ್ ಜಾಮ್ ಆಗಿದೆ. ತಕ್ಷಣವೇ ವಾಟ್ಸಾಪ್ ಹ್ಯಾಕರ್ ಕೈಯ ನಿಯಂತ್ರಣಕ್ಕೆ ಸಿಲುಕಿಕೊಂಡಿದೆ.
ಎಚ್ಚರಿಕೆ: ಇದು ಕೇವಲ ಒಬ್ಬರ ಕಥೆಯಲ್ಲ!
ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ. ಡಿಜಿಟಲ್ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಕಿವಿಗೆ ಬೀಳಬೇಕಾದ ಎಚ್ಚರಿಕೆಯ ಗಂಟೆ. ನಿಮ್ಮ ಒಂದು ಸಣ್ಣ ಮೈಮರೆವು ನಿಮ್ಮನ್ನು ಮತ್ತು ನಿಮ್ಮ ಸಂಪರ್ಕದಲ್ಲಿರುವ ನೂರಾರು ಜನರನ್ನು ಆರ್ಥಿಕ ಅಪಾಯದ ಕೂಪಕ್ಕೆ ತಳ್ಳಬಹುದು. ಇದು ಕೇವಲ ಆರ್ಥಿಕ ನಷ್ಟ ಮಾತ್ರವಲ್ಲದೇ, ವರ್ಷಗಳಿಂದ ಕಷ್ಟಪಟ್ಟು ಗಳಿಸಿದ ನಂಬಿಕೆ ಮತ್ತು ಸಂಬಂಧಗಳಿಗೂ ದೊಡ್ಡ ಮಟ್ಟದ ಹಾನಿ ಉಂಟು ಮಾಡಬಹುದು.
ನೀವು ಮಾಡಬೇಕಾದದ್ದು ಏನು?
ಕಾನೂನು ಕ್ರಮಗಳು ಈ ಪಿಡುಗನ್ನು ಮಟ್ಟಹಾಕಲು ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
1. ಭದ್ರತಾ ಕವಚ (Two-Step Verification): ತಕ್ಷಣವೇ ನಿಮ್ಮ ವಾಟ್ಸಾಪ್ ಸೆಟ್ಟಿಂಗ್ನಲ್ಲಿ ‘ಟೂ-ಸ್ಟೆಪ್ ವೆರಿಫಿಕೇಶನ್’ ಅನ್ನು ಸಕ್ರಿಯಗೊಳಿಸಿ. ಇದು ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ ನೀಡುತ್ತದೆ.
2. ವಂಚನೆಯ ಗಾಳ (ಅಪರಿಚಿತ ಲಿಂಕ್): ವಾಟ್ಸಾಪ್ ಅಥವಾ ಯಾವುದೇ ಮಾಧ್ಯಮದಲ್ಲಿ ಬರುವ ಅಪರಿಚಿತ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ.
3. ದೃಢೀಕರಣ (Verification is Key): ನಿಮ್ಮ ಸ್ನೇಹಿತರು, ಸಂಬಂಧಿಕರಿಂದ ಹಣ ಕೇಳುವ ಸಂದೇಶ ಬಂದರೆ, ಎಷ್ಟೇ ತುರ್ತಿದ್ದರೂ, ಅವರಿಗೆ ನೇರವಾಗಿ ಕರೆ ಮಾಡಿ ಖಚಿತಪಡಿಸಿಕೊಳ್ಳದೆ ಒಂದೇ ಒಂದು ರೂಪಾಯಿ ಕಳುಹಿಸಬೇಡಿ.ತಂತ್ರಜ್ಞಾನ ನಮ್ಮ ಬದುಕನ್ನು ಸುಲಭವಾಗಿಸಿದೆ, ಆದರೆ ಅದೇ ತಂತ್ರಜ್ಞಾನ ನಮ್ಮನ್ನು ಬೀದಿಗೆ ತರಲೂಬಹುದು. ಜಾಗೃತರಾಗಿರಿ. ಸುರಕ್ಷಿತರಾಗಿರಿ. ನಿಮ್ಮ ಆಪ್ತರನ್ನು ಈ ಕುರಿತು ಎಚ್ಚರಿಸಿ.











































