ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ 23 ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್

Picture of Savistara

Savistara

Bureau Report

ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ 23 ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ತುಮಕೂರು: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ 23 ಆರೋಪಿಗಳಿಗೆ 1 ವರ್ಷ ಶಿಕ್ಷೆ ಹಾಗೂ ತಲಾ 15.000/- ರೂ ನಂತೆ ಒಟ್ಟು 3,45,000/- ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಏನಿದು ಘಟನೆ, ಹಿನ್ನೆಲೆ ಹೀಗಿದೆ: 2021 ಜುಲೈ 3 ರಂದು ಸಂಜೆ 5.00 ಗಂಟೆಗೆ ಕೋವಿಡ್-19 ವಾರದ ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಆದೇಶದನ್ವಯ ವಾರದ ಅಂತ್ಯದ ಲಾಕ್ ಡೌನ್ ಆದೇಶದಂತೆ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ವಿಧಿಸಲಾಗಿತ್ತು. ಹೀಗಿದ್ದರೂ ಸರ್ಕಾರದ ಲಾಕ್‌ಡೌನ್ ಆದೇಶವನ್ನು ಉಲ್ಲಂಘನೆ ಮಾಡಿ ಗುಬ್ಬಿ ತಾಲೂಕಿನ ಚಿಕ್ಕಕುನ್ನಾಲ ಸರ್ಕಲ್​​ನಲ್ಲಿ ಅಪರಾಧಿ-1 ಆದೀರ್ ಅಹಮದ್ ಎಂಬಾತ ಚಿಲ್ಲರೆ ಅಂಗಡಿ ತೆರೆದು ಕಾನೂನು ಬಾಹಿರವಾಗಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಸರ್ಕಾರದ ಆದೇಶದಂತೆ ಅಂಗಡಿ ಮುಚ್ಚುವಂತೆ ಸೂಚಿಸಿದರೂ ಸಹ ಸೂಚನೆಯನ್ನು ಪಾಲಿಸದೇ ಅಂಗಡಿಯನ್ನು ಮುಚ್ಚದೇ ಈತನೊಂದಿಗೆ ಇದ್ದ ಇತರೆ 22 ಜನ ಆರೋಪಿಗಳು ಸಮವಸ್ತ್ರದಲ್ಲಿ ಇದ್ದ ಪೊಲೀಸ್ ಸಿಬ್ಬಂದಿಗಳೊಂದಿಗೆ ವಾಗ್ವಾದ ಮಾಡಿದ್ದರು.

ಅವರನ್ನು ಹಿಡಿದು ಎಳೆದಾಡಿ ತಳ್ಳಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿ, ಸಿಬ್ಬಂದಿಯವರು ಹತ್ತಿರದಲ್ಲಿದ್ದ ಜೀಪಿಗೆ ಹೋಗಿ ಕುಳಿತುಕೊಂಡಾಗ ಜೀಪಿನ ಮೇಲೆ ಕಲ್ಲು ಎಸೆದು ಸರ್ಕಾರಿ ವಾಹನವನ್ನು ಜಖಂ ಮಾಡಿದ್ದರು ಎಂಬ ಆರೋಪ ಮಾಡಲಾಗಿತ್ತು.

ಕರ್ನಾಟಕ ಎಪಿಡೆಮಿಕ್ ಆಕ್ಟ್ ಪ್ರಕಾರ ಪ್ರಕರಣ:

ಈ ಬಗ್ಗೆ ಸಿ. ಎಸ್ ಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಎಪಿಡೆಮಿಕ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಪ್ರಕರಣದ ತನಿಖೆ ನಡೆಸಿದ್ದ ಗುಬ್ಬಿ ವೃತ್ತ ನಿರೀಕ್ಷಕ ನದಾಫ್ ಆರೋಪಿಗಳ ವಿರುದ್ಧ ದೋಷರೋಪಣ ಪತ್ರವನ್ನು ಜೆಎಂಎಫ್​​ಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸಿಸಿ ನಂ-2921/2021 ರಂತೆ ವಿಚಾರಣೆ ನಡೆದು, ಆರೋಪಿಗಳು ಮಾಡಿದ ಕೃತ್ಯವು ಘನ ನ್ಯಾಯಾಲಯದಲ್ಲಿ ಸಾಬೀತಾದ ಕಾರಣ 23 ಆರೋಪಿಗಳಿಗೆ 1 ವರ್ಷ ಸಾದಾ ಶಿಕ್ಷೆ ಹಾಗೂ ತಲಾ 15,000/- ರೂ ನಂತೆ ಒಟ್ಟು 3,45,000/- ರೂ ದಂಡವನ್ನು ವಿಧಿಸಿದೆ.ದಂಡದ ಮೊತ್ತದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿದಾರರಾದ ಸೋಮಶೇಖರ್ ಪಿಎಸ್‌ಐ, ಕುಮಾರಸ್ವಾಮಿ ಎಎಸ್‌ಐ, ಸಿಬ್ಬಂದಿ ರಾಜು ದೊಡ್ಡನಿಂಗಣ್ಣನವರ್ ಹಾಗೂ ದುಶ್ಯಂತ್ ಅವರುಗಳಿಗೆ ತಲಾ 15,000/- ರೂಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

[t4b-ticker]
error: Content is protected !!