ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರು? ಮೋದಿ-ಆರ್‌ಎಸ್‌ಎಸ್‌ ನಡುವೆ ಮೂಡ್ತಿಲ್ಲ ಒಮ್ಮತ; ಫೀಡ್‌ಬ್ಯಾಕ್ ಸೂತ್ರಕ್ಕೆ ಮೊರೆ!

Picture of Savistara

Savistara

Bureau Report

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕಾಲ ಸನ್ನಿಹಿತವಾಗಿದೆ. ಬಿಹಾರ ಚುನಾವಣೆಗೂ ಮುನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಪಕ್ಷದ ಹಿರಿಯ ನಾಯಕರು ಮತ್ತು ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸಿ, ಜಾತಿ ಸಮೀಕರಣ ಮತ್ತು ರಾಜಕೀಯ ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನಂತರದ ನಾಯಕತ್ವ ಹುಡುಕಾಟ ನಡೆಸುತ್ತಿರುವುದು ಹಾಗೂ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವೆ ಒಮ್ಮತ ಮೂಡದ ಕಾರಣ ಹೊಸ ಪ್ರಕ್ರಿಯೆಗೆ ಬಿಜೆಪಿ ಮುಂದಾಗಿದೆ.

ಹೊಸದಿಲ್ಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕೊನೆಗೂ ಸಮಯ ಕೂಡಿ ಬಂದಂತೆ ಕಾಣುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕೇಸರಿ ಪಾಳಯ ಹೊಸ ಸಾರಥಿಯನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಬಿಹಾರದಲ್ಲಿ ಚುನಾವಣೆಯನ್ನು ಎದುರಿಸಲು ಬಿಜೆಪಿ ತಯಾರಿ ನಡೆಸಿದೆ. ಇದಕ್ಕಾಗಿ ಪಕ್ಷದ ವರಿಷ್ಠರು ಫೀಡ್‌ಬ್ಯಾಕ್‌ ಪ್ರಕ್ರಿಯೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಪಕ್ಷವು ತನ್ನ ಹಿರಿಯ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ, ಅವರಿಂದ ಅಭಿಪ್ರಾಯ ಪಡೆಯುತ್ತಿದೆ.

ಈ ಪ್ರಕ್ರಿಯೆಯಲ್ಲಿ ಜಾತಿ ಸಮೀಕರಣಗಳು, ನಾಯಕರ ಜನಪ್ರಿಯತೆ ಮತ್ತು ಇತರ ರಾಜಕೀಯ ಪರಿಗಣನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಉಪರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವಾಗಲೂ ಇದೇ ಪ್ರಕ್ರಿಯೆಯನ್ನು ಬಿಜೆಪಿ ಅನುಸರಿಸಿತ್ತು ಎಂದು ತಿಳಿದುಬಂದಿದೆ. ಪಕ್ಷದ ಮುಂದಿನ ನಡೆಯನ್ನು ನಿರ್ಧರಿಸಲು ಸಹಾಯವಾಗುವಂತೆ ಪಕ್ಷವು ಈಗಾಗಲೇ 100 ಪ್ರಮುಖ ನಾಯಕರನ್ನು ಸಂಪರ್ಕಿಸಿದೆ. ಹಲವು ಕ್ಯಾಬಿನೆಟ್‌ ಸಚಿವರು ಈ ಪ್ರಕ್ರಿಯೆಯ ಭಾಗವಾಹಿದ್ದಾರೆ ಎಂದು ತಿಳಿದುಬಂದಿದೆ. ಜನಪ್ರಿಯ ನಾಯಕರ ಆಯ್ಕೆಗಿಂತ ಭವಿಷ್ಯದ ರಾಜಕೀಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಪ್ರಕ್ರಿಯೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಮೋದಿ ನಂತರ ಯಾರು ಎಂಬ ಪ್ರಶ್ನೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಅನ್ನು ಕಾಡುತ್ತಿದ್ದು, ಅದಕ್ಕೆ ಉತ್ತರ ಕಂಡುಕೊಳ್ಳಲು ಫೀಡ್‌ಬ್ಯಾಕ್‌ ಪ್ರಕ್ರಿಯೆನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಮಾಲೋಚನೆ ಕಾರಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಅದಲ್ಲದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತ ಮೂಡದಿರುವ ಕಾರಣಕ್ಕೆ ಈ ಫೀಡ್‌ಬ್ಯಾಕ್‌ ಪ್ರಕ್ರಿಯೆಯನ್ನು ಪಕ್ಷ ಆರಂಭಿಸಿದೆ ಎಂದು ತಿಳಿದುಬಂದಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಆರ್‌ಎಸ್‌ಎಸ್‌ ಪಕ್ಷದಿಂದ ದೂರ ಉಳಿದಿತ್ತು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದೇ ಇರುವುದಕ್ಕೆ ಆರ್‌ಎಸ್‌ಎಸ್‌ ಮತ್ತೆ ಪಕ್ಷದ ಚಟುವಟಿಕೆಗಳತ್ತ ಮುಖ ಮಾಡಿದೆ. ಈ ಬಾರಿ ಆರ್‌ಎಸ್‌ಎಸ್‌ ಒಪ್ಪಿತ ನಾಯಕರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಬೇಕು ಎಂದು ಆರ್‌ಎಸ್‌ಎಸ್‌ ಪಟ್ಟು ಹಿಡಿದಿದೆ. ಈ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿದೆ.

ಉಪರಾಷ್ಟ್ರಪತಿ ಚುನಾವಣೆಯಿಂದ ವಿಳಂಬ!

ವಿಳಂಬಕ್ಕೆ ಮತ್ತೊಂದು ಕಾರಣವೆಂದರೆ, ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆ. ಜಗದೀಪ್ ಧನಕರ್ ಅವರ ಅನಿರೀಕ್ಷಿತ ರಾಜೀನಾಮೆಯಿಂದ ಈ ಚುನಾವಣೆ ಎದುರಾಗಿದೆ. ಬಿಜೆಪಿ ಇದನ್ನು ನಿರೀಕ್ಷಿಸಿದ್ದಿಲ್ಲ. ಇದೀಗ ತನ್ನ ಅಭ್ಯರ್ಥಿಯಾಗಿರುವ ಮಹಾರಾಷ್ಟ್ರ ರಾಜ್ಯಪಾಲ, ತಮಿಳುನಾಡಿನ ಸಿಪಿ ರಾಧಾಕೃಷ್ಣನ್ ಅವರನ್ನು ಗರಿಷ್ಠ ಮತಗಳಿಂದ ಗೆಲ್ಲಿಸಲು ಪಕ್ಷ ಶ್ರಮಿಸುತ್ತಿದೆ. ಈ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮತ್ತೆ ಮುಂದಕ್ಕೆ ಹೋಗಿದೆ. ನಡ್ಡಾ ಅವರ ಅವಧಿ ವಿಸ್ತರಣೆ:ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಜನವರಿ 2020 ರಲ್ಲಿ ಆಯ್ಕೆಯಾಗಿದ್ದರು. ಅವರ ಮೂರು ವರ್ಷಗಳ ಅವಧಿ ಮುಗಿದ ನಂತರ, 2024ರ ಲೋಕಸಭಾ ಚುನಾವಣೆ ಮತ್ತು ಸಂಘಟನಾತ್ಮಕ ಕಾರ್ಯಚಟುವಟಿಕೆಗಳ ಕಾರಣದಿಂದ ಅವರಿಗೆ ಎರಡು ಬಾರಿ ಅವಧಿ ವಿಸ್ತರಣೆ ನೀಡಲಾಗಿತ್ತು.

ಪ್ರಮುಖ ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆ ತಡ

ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಳಂಬಕ್ಕೆ ಮೂರನೇ ಕಾರಣ, ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕದಂತಹ ಪ್ರಮುಖ ರಾಜ್ಯ ಘಟಕಗಳ ಅಧ್ಯಕ್ಷರ ಆಯ್ಕೆ ತಡವಾಗಿರುವುದು. ಇವುಗಳ ಅಧ್ಯಕ್ಷರನ್ನು ಆಯ್ಕೆ ಮಾಡದೇ ಬಿಜೆಪಿ ಮುಂದುವರೆಯಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೊದಲು ಎಲ್ಲಾ ರಾಜ್ಯ ಘಟಕಗಳಲ್ಲಿ, ಅಗತ್ಯವಿದ್ದಲ್ಲಿ ಹೊಸದಾಗಿ, ನಾಯಕತ್ವವನ್ನು ಆಯ್ಕೆ ಮಾಡಬೇಕೆಂದು ಬಿಜೆಪಿ ಬಯಸಿದೆ. ಪಕ್ಷದ ಸಂವಿಧಾನದ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕನಿಷ್ಠ 19 ಘಟಕಗಳಲ್ಲಿ ಅಧ್ಯಕ್ಷರು ಇರಬೇಕು. ಕಳೆದ ತಿಂಗಳು ಬಿಜೆಪಿ 28 ರಾಜ್ಯಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಹರಿಯಾಣ, ದಿಲ್ಲಿ, ಜಾರ್ಖಂಡ್, ಪಂಜಾಬ್, ಮತ್ತು ಮಣಿಪುರ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಬಾಕಿ ಇದೆ.

ಸಂಘಟನೆಯಲ್ಲಿ ಹೊಸ ನಿಯಮ ತಂದ ಬಿಜೆಪಿ!

ಇನ್ನೂ ಬಿಜೆಪಿ ಸಂಘಟನೆಯಲ್ಲಿ ತಳಮಟ್ಟದಲ್ಲಿಯೂ ಬದಲಾವಣೆ ತರಲಾಗುತ್ತಿದೆ. ಮಂಡಲ ಅಧ್ಯಕ್ಷರ ಆಯ್ಕೆಯಲ್ಲಿ ಭವಿಷ್ಯದ ನಾಯಕರಿಗೆ ಅವಕಾಶ ನೀಡಲು ವಯೋಮಿತಿಯನ್ನು 40 ವರ್ಷಕ್ಕಿಂತ ಕಡಿಮೆ ನಿಗದಿಪಡಿಸಲಾಗಿದೆ. ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರಾಗಲು ಅಭ್ಯರ್ಥಿಯು ಕನಿಷ್ಠ ಹತ್ತು ವರ್ಷಗಳ ಕಾಲ ಬಿಜೆಪಿಯ ಸಕ್ರಿಯ ಸದಸ್ಯರಾಗಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇತರೆ ಪಕ್ಷಗಳಿಂದ ಬಂದ ನಾಯಕರಿಗೆ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡುವುದರಿಂದ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಸೃಷ್ಟಿಯಾಗುತ್ತಿದೆ. ಈ ಹಿನ್ನೆಲೆ ಈ ನಿಯಮವನ್ನು ತರಲಾಗಿದೆ. ಆದರೆ, ಅನೇಕ ವಿನಾಯಿತಿಗಳನ್ನು ಕೂಡ ನೀಡಲಾಗಿದೆ.

[t4b-ticker]
error: Content is protected !!