ಬೆಳಗಾವಿಯ ಆರ್‌ಎಸ್‌ಎಸ್‌ ಸಭೆಗೆ ಅಗತ್ಯ ನೆರವು ನೀಡುತ್ತೇವೆ : ಸಚಿವ ಸತೀಶ್ ಜಾರಕಿಹೊಳಿ

Picture of Savistara

Savistara

Bureau Report

ಬೆಂಗಳೂರು, ಜು.7- ಬೆಳಗಾವಿಯಲ್ಲಿ ನಡೆಯುವ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಪ್ರಾಂತ ಪ್ರಚಾರಕರ ಸಭೆಗೆ ಜಿಲ್ಲಾಡಳಿತದಿಂದ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಸಮಾವೇಶಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ಜಿಲ್ಲಾಡಳಿತ ನೀಡಲಿದೆ. ಆರ್‌ಎಸ್ಎಸ್‌ ಸಭೆ ನಡೆಸಲು ನಮ ವಿರೋಧ ಇಲ್ಲ ಎಂದು ಹೇಳಿದರು.ಸಮಾವೇಶದಲ್ಲಿ ರಾಜಕೀಯ ವಿಚಾರಗಳು ಚರ್ಚೆಯಾಗುವ ಬಗ್ಗೆ ತಮಗೆ ಮಾಹಿತಿ ಇಲ್ಲ. ತಮದು ರಾಜಕೀಯ ಸಂಘಟನೆಯಲ್ಲ, ನಾವು ರಾಜಕೀಯ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್‌ ಹೇಳಿಕೊಂಡಿದೆ. ನಾವು ಕಾದು ನೋಡುತ್ತೇವೆ ಎಂದರು. ಆರ್‌ಎಸ್‌ಎಸ್‌ ಸಮಾವೇಶಕ್ಕೆ ಅನುಮತಿ ನೀಡುವ ಬಗ್ಗೆ ಗೃಹ ಇಲಾಖೆ ನಿರ್ಧಾರ ತೆಗೆದುಕೊಳ್ಳುತ್ತದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಂಡರು.ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆ ಸಂತಸ ಮೂಡಿಸಿದೆ. ಬರಗಾಲ ಎದುರಾಗಬಹುದು, ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂಬ ಆತಂಕಗಳು ನಿವಾರಣೆಯಾಗಿವೆ. ಅಣೆಕಟ್ಟೆಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದೆ. ಕೃಷ್ಣ, ಮಲಪ್ರಭ, ಘಟ್ಟಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಹಿಡ್ಕಲ್ ಡ್ಯಾಮ್‌ಗೆ ಇನ್ನೂ ನೀರು ತುಂಬಬೇಕು.

ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗಲಿದೆ. ಬರದ ಛಾಯೆ ಆವರಿಸುತಿತ್ತು. ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಬವಣೆ ನೀಗುತ್ತಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ರೀತಿ ಮಳೆ ಸುರಿದರೆ ಒಳ್ಳೆಯದಾಗಲಿದೆ. ರೈತರು ಈಗಾಗಲೇ ಖುಷಿಯಿಂದಿದ್ದಾರೆ ಎಂದರು.ಹಾವೇರಿಯಲ್ಲಿ ಈಗಾಗಲೇ ಮೋಡ ಬಿತ್ತನೆಯಾಗುತ್ತಿದೆ. ಇದನ್ನು ರಾಜ್ಯಾದ್ಯಂತ ನಡೆಸಲು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು. ತಮ ಆಪ್ತರೊಬ್ಬರು ಬಿಜೆಪಿ ಸೇರಿರುವುದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಸದರಿ ವ್ಯಕ್ತಿ ನಮ ಸಂಪರ್ಕ ಬಿಟ್ಟು ಒಂದು ವರ್ಷವಾಗಿದೆ. ಈಗ ಬೇರೆ ಪಕ್ಷ ಸೇರಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ನಾವು ಏನೂ ಹೇಳಲು ಸಾಧ್ಯವಿಲ್ಲ. ಆದರೆ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಬೇಕೆಂಬುದು ನಮ ಅಭಿಪ್ರಾಯ ಎಂದರು.

[t4b-ticker]
error: Content is protected !!