ರಸ್ತೆ ಅಪಘಾತ ಪ್ರಕರಣ: ಪರಿಹಾರ ₹87 ಲಕ್ಷಕ್ಕೆ ಹೆಚ್ಚಿಸಿದ ‘ಸುಪ್ರೀಂ’

Picture of Savistara

Savistara

Bureau Report

ನವದೆಹಲಿ: ರಸ್ತೆ ಅಪಘಾತದಲ್ಲಿ ಶಾಶ್ವತವಾಗಿ ಪಾರ್ಶ್ವ ವಾಯುವಿಗೆ ಒಳಗಾದ ಮಗುವಿಗೆ ನೀಡುವ ಮೋಟಾರು ವಾಹನ ಪರಿಹಾರವನ್ನು ಸುಪ್ರೀಂ ಕೋರ್ಟ್ ಹೆಚ್ಚುವರಿ ಬಡ್ಡಿಯೊಂದಿಗೆ ₹87 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎನ್. ಕೋಟೇಶ್ವರ ಸಿಂಗ್, ವಿನೋದ್ ಚಂದ್ರನ್ ಅವರ ಪೀಠವು ತೀರ್ಪು ನೀಡಿದೆ. 13 ವರ್ಷದ ಬಾಲಕಿಯ ಅಂಗವೈಕಲ್ಯವನ್ನು ಶೇ 100ರಷ್ಟು ಎಂದು ಪರಿಗಣಿಸಿ, ಆಕೆಯ ಜೀವಮಾನದ ಆರೈಕೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಪರಿಹಾರ ಮೊತ್ತವನ್ನು ₹87,15,137ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದೆ.ಅಪಘಾತ ನಡೆದು 9 ವರ್ಷಗಳ ನಂತರ ಈ ಮಹತ್ವದ ಆದೇಶ ಹೊರಬಿದ್ದಿದೆ. ಆರಂಭದಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ₹14.84 ಲಕ್ಷ ಪರಿಹಾರ ನೀಡಿತ್ತು. ನಂತರ ಹೈಕೋರ್ಟ್‌ ಈ ಮೊತ್ತವನ್ನು ₹6 ಲಕ್ಷ ಹೆಚ್ಚಿಸಿತ್ತು. ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.2018ರ ಜೂನ್‌ನಲ್ಲಿ ಘಟನೆ ನಡೆದಿತ್ತು. ಐದು ವರ್ಷದ ಬಾಲಕಿ ಚೇತನಾ ಶರ್ಮಾ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದಾಗಿ ಕಾರು ಅಪಘಾತಕ್ಕೀಡಾಗಿತ್ತು. ಡಿಕ್ಕಿಯ ರಭಸಕ್ಕೆ ಬಾಲಕಿಯ ಬೆನ್ನುಮೂಳಗೆ ಗಂಭೀರ ಗಾಯವಾಗಿ, ಶಾಶ್ವತ ಪಾರ್ಶ್ವವಾಯುವಿಗೆ ಒಳಗಾಗಿದ್ದಳು. ವೈದ್ಯರು ಬಾಲಕಿಗೆ ಜೀವನಪೂರ್ತಿ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ದೃಢಪಡಿಸಿದ್ದರು.

ಬೇಬಿ ಸಾಕ್ಷಿ ಗ್ರಿಯೊಲಾ – ಮಂಜೂರ್ ಅಹ್ಮದ್ ಸೈಮನ್ (2024) ಪ್ರಕರಣದಲ್ಲಿ ಇದೇ ರೀತಿ ಪಾರ್ಶ್ವವಾಯುವಿಗೆ ಒಳಗಾದ ಮಗುವಿಗೆ ಕೋರ್ಟ್ ಪರಿಹಾರ ನಿಗದಿಪಡಿಸುವಾಗ ಪರಿಗಣಿಸಿದ ಅಂಶವನ್ನು ಬಾಲಕಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಬಾಲಕಿಯ ಅಂಗವೈಕಲ್ಯವನ್ನು ಶೇ 100ರಷ್ಟು ಎಂದು ಪರಿಗಣಿಸಬೇಕು ಎಂಬ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿತು.ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಈ ತೀರ್ಪು ಬಾಲಕಿಯ ಕುಟುಂಬಕ್ಕೆ ಅಗತ್ಯವಾದ ಪರಿಹಾರ ನೀಡುತ್ತದೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಅಪಘಾತ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಬಲವಾದ ಮಾನದಂಡ ವನ್ನು ನಿಗದಿಪಡಿಸುತ್ತದೆ ಎಂದೂ ನ್ಯಾಯಪೀಠ ಹೇಳಿದೆ.

[t4b-ticker]
error: Content is protected !!