ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಭಾಗವಾಗಿ ಗಣತಿ ನಮೂನೆ ವಿತರಣೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಬಿಎಲ್ಒಗಳ ವಿರುದ್ಧ ಎಫ್ಐಆರ್ ದಾಖಲಿಸದೇ ಇರುವ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಿಗೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು (ಎಇಆರ್ಒ) ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಎಇಆರ್ಒಗಳಿಗೆ ಮತದಾರರ ನೋಂದಣಾಧಿಕಾರಿಗಳು (ಇಆರ್ಒ) ನೋಟಿಸ್ ನೀಡಿದ್ದಾರೆ.ಬೆಂಗಳೂರಿನ ಗೋವಿಂದರಾಜನಗರ, ಜಯನಗರ, ಬಿಟಿಎಂ ಬಡಾವಣೆ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳು ಗಣತಿ ನಮೂನೆ ವಿತರಣೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಹಿಂದೆ ಉಳಿದಿವೆ. ಈ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಆರ್ಒ, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರಿಗೆ ಇದೇ ಸೋಮವಾರ ಮತ್ತು ಮಂಗಳವಾರ ನೋಟಿಸ್ ನೀಡಲಾಗಿದೆ.ಭಾರತೀಯ ಚುನಾವಣಾ ಆಯೋಗದ ಉಪಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರ ರಾಜ್ಯ ಭೇಟಿಯ ನಂತರ ಬುಧವಾರ ಮತ್ತೊಂದು ಸುತ್ತಿನ ನೋಟಿಸ್ ನೀಡಲಾಗಿದೆ. ನೋಟಿಸ್ನ ಪ್ರತಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.
“ನಿಮಗೆ ನೀಡಿದ ಕಾಲಾವಧಿಯಲ್ಲಿ ಗಣತಿ ನಮೂನೆ ವಿತರಣೆ ಕಾರ್ಯ ಪೂರ್ಣಗೊಳಿಸದ ಬಿಎಲ್ಒಗಳ ವಿರುದ್ಧ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಎಂದು ಹಲವು ಬಾರಿ ಸೂಚಿಸಲಾಗಿದೆ. ಆದರೂ, ನೀವು ಎಫ್ಐಆರ್ ದಾಖಲಿಸಿರುವುದಿಲ್ಲ. ಬಿಎಲ್ಒಗಳ ಜತೆಗೆ ಸಮನ್ವಯ ಸಾಧಿಸಿ, ಎಸ್ಐಆರ್ನಲ್ಲಿ ಪ್ರಗತಿ ದಾಖಲಿಸುವಲ್ಲಿ ವಿಫಲರಾಗಿದ್ದೀರಿ. ಭಾರತೀಯ ಚುನಾವಣಾ ಆಯೋಗದ ಕಾಯ್ದೆಯ ಅನ್ವಯ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು’ ಎಂದು ಬಿಎಲ್ಒ ಮೇಲ್ವಿಚಾರಕರಿಗೆ ನೀಡಿರುವ ನೋಟಿಸ್ನಲ್ಲಿ ಕಾರಣ ಕೇಳಲಾಗಿದೆ.ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಇದೇ 6ರ ಸೋಮವಾರದಂದು ಗಣತಿ ನಮೂನೆ ವಿತರಣೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಪ್ರಗತಿ ತೀರಾ ಕಡಿಮೆ ಇದೆ. ಗಣತಿ ನಮೂನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಿ ಎಂದು ಪದೇ-ಪದೇ ಸೂಚನೆ ನೀಡಿದ್ದರೂ, ಪ್ರಗತಿ ಸಾಧ್ಯವಾಗಿಲ್ಲ ಏಕೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನೀಡಿರುವ ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಲಿಖಿತ ಸಮಜಾಯಿಷಿ ನೀಡಿ. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ.
‘ವಿತರಣೆಗೆ ಗುರಿ ನೀಡಿಲ್ಲ”
ಗಣತಿ ನಮೂನೆಗಳನ್ನು ವಿತರಿಸಲು ಬಿಎಲ್ಗಳಿಗೆ ಯಾವುದೇ ಕಾಲಾವಧಿ, ಗಡುವು ಅಥವಾ ಗುರಿ ನೀಡಿಲ್ಲ. ಜುಲೈ 29ರವರೆಗೂ ಗಣತಿ ನಮೂನೆಗಳನ್ನು ವಿತರಿಸಲು ಮತ್ತು ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ, ಡಿಜಿಟಲೀಕರಿಸಲು ಕಾಲಾವಕಾಶ ಇದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ನುಕುಮಾರ್ ಹೇಳಿದರು.’ಪ್ರಜಾವಾಣಿ’ಯ ಪ್ರಶ್ನೆಗೆ ಉತ್ತರಿಸಿದ ಅವರು ‘ಕೆಲವು ಕ್ಷೇತ್ರಗಳಲ್ಲಿ ಗಣತಿ ನಮೂನೆ ವಿತರಣೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಅಧಿಕಾರಿಗಳು ಸಭೆ ನಡೆಸಿ, ಪ್ರಗತಿ ಸಾಧಿಸಿ ಎಂದು ಹೇಳಿರಬಹುದು’ ಎಂದಷ್ಟೇ ಹೇಳಿದರು.
ಶೇ 90ರಷ್ಟು ವಿತರಿಸಬೇಕಿತ್ತು
”ಜುಲೈ 8ರ ಬುಧವಾರ ಸಂಜೆ ವೇಳೆಗೆ ಶೇ 90ರಷ್ಟು ಗಣತಿ ನಮೂನೆಗಳನ್ನು ವಿತರಿಸುವ ಗುರಿ ನೀಡಲಾಗಿತ್ತು. ಹೀಗಿದ್ದೂ, ಪ್ರಗತಿ ತೋರಿಸದ ನಿಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು’ ಎಂದು ಬಿಎಲ್ಒ ಮೇಲ್ವಿಚಾರಕರಿಗೆ ಬುಧವಾರ ಸಂಜೆ ಮತ್ತೆ ನೋಟಿಸ್ ನೀಡಲಾಗಿದೆ.









































