ಬೆಂಗಳೂರು: ಮುಂಬರುವ ಐಪಿಎಲ್ ವೇಳೆ ಪಂದ್ಯಗಳ ದಿನಆರ್ಸಿಬಿ ಆಟಗಾರರು 11ನೇ ಸಂಖ್ಯೆಯ ಜರ್ಸಿ ಧರಿಸಿ ಅಭ್ಯಾಸ ನಡೆಸಲಿದ್ದಾರೆ. ಕಳೆದ ವರ್ಷ ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ನಡೆದ ಕಾಲ್ತುಳಿತದ ದುರಂತದಲ್ಲಿ ಸಾವನ್ನಪ್ಪಿದ ಅಭಿಮಾನಿಗಳ ಗೌರವಾರ್ಥ ಖಾಯಂ ಆಗಿ 11 ಆಸನಗಳನ್ನು ಖಾಲಿ ಇರಿಸಲು ಆರ್ಸಿಬಿ ಫ್ರಾಂಚೈಸಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.ಆರ್ಸಿಬಿ ತಂಡವು ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ನಂತರ ಜೂನ್ 4ರಂದು ನಡೆದ ಆರ್ಸಿಬಿಯ ಸಂಭ್ರಮಾಚರಣೆಯ ವೇಳೆ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ರಸ್ತೆಗೆ ಇಳಿದಿದ್ದು, ಸೂಕ್ತ ಭದ್ರತೆಗೆ ಮನವಿ ಮಾಡದೆ ಸಂಭ್ರಮಾಚರಣೆಯನ್ನು ಆಚರಿಸಿದ ರೀತಿಗೆ ಫ್ರಾಂಚೈಸಿ ಭಾರೀ ಟೀಕೆಗೆ ಗುರಿಯಾಗಿತ್ತು.
“ಪಂದ್ಯಕ್ಕಿಂತ ಮೊದಲು ನಡೆಯುವ ಅಭ್ಯಾಸದ ಸಮಯದಲ್ಲಿ ಆಟಗಾರರು 11ನೇ ಸಂಖ್ಯೆಯ ಜರ್ಸಿಯನ್ನು ಧರಿಸಲಿದ್ದಾರೆ. ಈ ಜರ್ಸಿಯನ್ನು ಪಂದ್ಯದ ವೇಳೆ ಧರಿಸುವುದಿಲ್ಲ. ಆ ದಿನದಂದು ಕಪ್ಪುತೋಳುಪಟ್ಟಿಯನ್ನು ಧರಿಸಲಾಗುವುದು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಖಾಯಂ ಆಗಿ 11 ಸೀಟುಗಳನ್ನು ಖಾಲಿ ಇಡಲು ಚಿಂತಿಸುತ್ತಿದ್ದೇವೆ. ಇದರೊಂದಿಗೆ ಆ 11 ಅಭಿಮಾನಿಗಳು ನಮ್ಮೊಂದಿಗೆ ಯಾವಾಗಲೂ ಇರಲಿದ್ದಾರೆ” ಎಂದು ಆರ್ಸಿಬಿ ಸಿಇಒ ರಾಜೇಶ್ ಮೆನನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.ಆರ್ಸಿಬಿ ತಂಡವು ಮಾರ್ಚ್ 28ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈ ವರ್ಷದ ಐಪಿಎಲ್ನ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಆರ್ಸಿಬಿ ತನ್ನ ತವರು ಮೈದಾನದಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಲಿದೆ.













































