Shah Rukh Khan : ಮಾತು ಆಡಿದರೆ ಹೊಯ್ತು ಮುತ್ತು ಒಡೆದರೆ ಹೋಯ್ತು ಅನ್ನೋ ಒಂದು ಗಾದೆ ಮಾತಿದೆ. ಏನೇ ಮಾತನಾಡಿದರೂ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ, ಮಾತು ಕೊನೆಯವರೆಗೂ ಉಳಿದು ಬಿಡುತ್ತದೆ. ಈ ಮಾತಿಗೆ ಇಂದಿನ ಡಿಜಿಟಲ್ ಯುಗ ತಾಜಾ ಸಾಕ್ಷಿಯಂತಿದೆ. ಏಕೆಂದರೆ, ಈ ಟೆಕ್ ಲೋಕದಲ್ಲಿ ನಾವಾಡುವ ಪ್ರತಿ ಮಾತು ದಾಖಲೆಯಾಗಿ ಉಳಿದುಬಿಡುತ್ತದೆ. ಯಾವುದು ಕೂಡ ಡಿಲೀಟ್ ಆಗುವುದಿಲ್ಲ. ಪ್ರಸಕ್ತ ಟ್ರೆಂಡ್ಗೆ ಅನುಗುಣವಾಗಿ ಹಳೆಯ ಹೇಳಿಕೆ ಮತ್ತು ವಿವಾದಗಳು ಕಣ್ಣು ಬಿಡುವಷ್ಟರಲ್ಲಿ ಮುನ್ನಲೆಗೆ ಬಂದು ಬಿಡುತ್ತದೆ. ಇದಕ್ಕೆ ತಾಜಾ ಸಾಕ್ಷಿಯೇ ಬಾಲಿವುಡ್ ಬಾದ್ಷಾ ಶಾರುಖ್ ಖಾನ್.
ಸದ್ಯ ಬಾಲಿವುಡ್ನಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಅದು ಧುರಂಧರ್ 2. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಮಾರ್ಚ್ 19ರಂದು ಬಿಡುಗಡೆಯಾದ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ 1400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿರುವ ಧುರಂಧರ್ 2 ಕೆಜಿಎಫ್ ಮತ್ತು ಆರ್ಆರ್ಆರ್ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಸಿನಿಮಾ ಪ್ರಿಯರು ಬೇಹುಗಾರಿಕೆ ಆಧಾರಿತ ಹಾಗೂ ಸಿನಿಮಾ ಉದ್ದಕ್ಕೂ ನೋಡುಗರ ಕೂತೂಹಲವನ್ನು ಹಿಡಿದಿಟ್ಟುಕೊಳ್ಳುವ ಒಳ್ಳೆಯ ಮನರಂಜನಾ ಸಿನಿಮಾಗೆ ಮಾರು ಹೋಗಿದ್ದಾರೆ. ಹೀಗಾಗಿ, ಎಲ್ಲೆಲ್ಲೂ ಇದೀಗ ಧುರಂಧರ್ ಸಿನಿಮಾದ್ದೇ ಚರ್ಚೆಯಾಗಿದೆ. ಪಾಕಿಸ್ತಾನ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ನಡುವೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರ ಹಳೆಯ ವಿಡಿಯೋವೊಂದು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಳೆಯ ವಿಡಿಯೋವನ್ನು ಮತ್ತೆ ಹರಿಬಿಟ್ಟು ಶಾರುಖ್ ಖಾನ್ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಹಳೆಯ ವಿಡಿಯೋದಲ್ಲಿ ಶಾರುಖ್ ಅವರು ಪಾಕಿಸ್ತಾನವನ್ನು ಹೊಗಳಿ, ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ಜೆಂಟಲ್ಮನ್ ಎಂದು ಕರೆದಿದ್ದರು. ಇದನ್ನು ನೋಡಿ ಇದೀಗ ಶಾರುಖ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಎಲ್ಲವೂ ರಾಜಕಾರಣಿಗಳಿಂದ
2010 ನೇ ಇಸವಿಯ ಹಳೇ ವಿಡಿಯೋದಲ್ಲಿ ಶಾರುಖ್ ಅವರು ಪಾಕಿಸ್ತಾನವನ್ನು ಕೊಂಡಾಡುತ್ತಾರೆ. ಅಲ್ಲದೆ, ರಾಜಕೀಯ ಹಾಗೂ ಅಪಪ್ರಚಾರದಿಂದಾಚೆಗೆ ಚಿಂತನೆ ಮಾಡುವಂತೆ ಭಾರತೀಯ ಯುವಕರಿಗೆ ಕರೆ ನೀಡುತ್ತಾರೆ. ನಮ್ಮ ಫ್ಯಾಮಿಲಿ ಕೂಡ ಪಾಕಿಸ್ತಾನದಿಂದ ಬಂದಿದೆ. ನಮ್ಮ ತಂದೆ ಅಲ್ಲಿಯೇ ಜನಿಸಿದರು. ಈಗ ಇರುವ ಎಲ್ಲ ಸಮಸ್ಯೆಗಳು ಭಾರತ ಮತ್ತು ಪಾಕಿಸ್ತಾನದ ರಾಜಕಾರಣಿಗಳಿಂದಲೇ ಬಂದಿವೆ. ಏಕೆಂದರೆ, ದೇಶದ ವಿಚಾರದಲ್ಲಿ ಏನೇ ನಿರ್ಧಾರ ತೆಗೆದುಕೊಂಡರು ಅದನ್ನು ರಾಜಕಾರಣಿಗಳೇ ತೆಗೆದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಪಾಕಿಸ್ತಾನಿಗಳು ಉತ್ತಮ ನೆರೆಹೊರೆಯವರು. ನಾವು ಪರಸ್ಪರ ಪ್ರೀತಿಸೋಣ ಎಂದು ಹೇಳಿದ್ದರು.
ಕಸಬ್ನನ್ನು ಜೆಂಟಲ್ಮನ್ ಎಂದ ಶಾರುಖ್
ಮತ್ತೊಂದು ವಿಡಿಯೋದಲ್ಲಿ 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಮಾಡಿದ ಉಗ್ರ ಕಸಬ್ನನ್ನು ಶಾರುಖ್ ಖಾನ್ ಜೆಂಟಲ್ಮ್ಯಾನ್ ಎಂದು ಕರೆದಿದ್ದಾರೆ. ಭಾರತದಲ್ಲಿ ಮುಸ್ಲಿಮರು ಅತೃಪ್ತರಾಗಿದ್ದಾರೆ ಎಂಬ ಕಾರಣಕ್ಕೆ ಭಯೋತ್ಪಾದನಾ ದಾಳಿಗಳು ನಡೆಯುತ್ತಿವೆ ಎಂಬ ವರದಿಗಾರರ ಮಾತನ್ನು ಖಾನ್ ತಳ್ಳಿಹಾಕಿದರು. ಬಾಂಬ್ ಎಸೆಯುವವನಿಗೆ ಸುಖ-ದುಃಖಗಳ ವಿವೇಚನೆ ಇರುವುದಿಲ್ಲ ಎಂದು ಹೇಳಿದ ಅವರು, ಅಜ್ಮಲ್ ಕಸಬ್ನಂತಹ ಉಗ್ರರಿಗೆ ಯಾವುದೇ ಸಿದ್ಧಾಂತ, ತರ್ಕ ಅಥವಾ ಶಿಕ್ಷಣ ಇರುವುದಿಲ್ಲ ಎಂದು ಕಠಿಣವಾಗಿ ಟೀಕಿಸಿದರು. ಆದರೆ, ಈ ಸಂದರ್ಭದಲ್ಲಿ ಅವರು ಕಸಬ್ನನ್ನು ಉದ್ದೇಶಿಸಿ ‘ಜೆಂಟಲ್ಮನ್’ ಎಂಬ ಪದವನ್ನು ಬಳಸಿದರು.
ಈಗ ಶಾರುಖ್ ಖಾನ್ ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಈಡಾಗಿದೆ. ಒಬ್ಬ ಕ್ರೂರ ಭಯೋತ್ಪಾದಕನನ್ನು ಗೌರವಯುತ ಪದದಿಂದ ಕರೆದಿದ್ದಕ್ಕಾಗಿ ನೆಟ್ಟಿಗರು ಖಾನ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ,













































