ಕೆ.ಎಫ್.ಡಿ.ಸಿ. ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆಗಾಗಿ ಎ.೧ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ೫ ನೇ ದಿನಕ್ಕೆ ಕಾಲಿಟ್ಟು ಅಂತಿಮವಾಗಿ ಏಪ್ರಿಲ್ ೬ ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವ ತೀರ್ಮಾನವನ್ನು ಕೈಗೊಂಡಿದ್ದರು.ಏ. ೬ ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಮತ್ತು ಕೆ ಎಫ್ ಡಿ ಸಿ ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ದೀರ್ಘ ಚರ್ಚೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು.
ಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಕೂಡಲೇ ಇವರ ಬೇಡಿಕೆಗೆ ಸ್ಪಂದಿಸುವಂತೆ ತಿಳಿಸಿದರು.ಅಂತಿಮವಾಗಿ ಅಧಿಕಾರಿಗಳು ಕಾರ್ಮಿಕರಿಗೆ ಕೊಡಲು ಬಾಕಿ ಇರುವ ವೇತನದ ಬಗ್ಗೆ ಮೂರು ತಿಂಗಳೊಳಗೆ ಸರಿಪಡಿಸಿ ಕೊಡುವ ಭರವಸೆಯನ್ನು ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ೧೫ ದಿನದೊಳಗೆ ಕೊಡಬೇಕೆಂದು ಪಟ್ಟು ಹಿಡಿದು ಬಳಿಕ ಶಾಸಕರ ಮಧ್ಯಸ್ಥಿಕೆಯಲ್ಲಿ ಆದಷ್ಟು ಶೀಘ್ರದಲ್ಲಿ ಮಾಡಿಕೊಡುವ ಭರವಸೆಯನ್ನು ನೀಡಿದರು. ಉಳಿದಂತೆ ಬಾಕಿ ಇರುವ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಿ ಕೊಡುವ ಭರವಸೆಗಳನ್ನು ನೀಡಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮುಖಂಡರಾದ ವಿನಯಕುಮಾರ್ ಕಂದಡ್ಕ, ಕೆಎಫ್ ಡಿ ಸಿ ಇಲಾಖೆಯ ಎ.ಡಿ. ಬೋರಯ್ಯ, ಡಿ.ಎಂ. ನಂದಗೋಪಾಲ್, ಎಡಿಎಂಗಳಾದ ಲತಾ ಭಟ್, ಡಾ. ಐಶ್ವರ್ಯ, ಕಿರಣ್ ಕುಮಾರ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.ಸುಳ್ಯ ಕೆ ಎಫ್ ಡಿ ಸಿ ಕಚೇರಿ ಮುಂಭಾಗದಲ್ಲಿ ಈ ಪ್ರತಿಭಟನೆ ನಡೆದಿದ್ದು, ಕಾರ್ಮಿಕ ಸಂಘಟನೆಗಳಾದ ಜನರಲ್ ಎಂಪ್ಲಾಯಸ್ ಯೂನಿಯನ್ ರಿ, ಕರ್ನಾಟಕ ತೋಟ ಮಜ್ಯೂರ್ ಸಂಘ ರಿ, ಕೆಎಫ್ಡಿಸಿ ಲೇಬರ್ ಯೂನಿಯನ್ಸ್ ರಿ ಸಂಘಟನೆಗಳ ಪದಾಧಿಕಾರಿಗಳಾದ ಶರತ್ ಕುಮಾರ್ ನಾಗಪಟ್ಟಣ, ಸುಂದರಲಿಂಗಂ ಐವರ್ನಾಡು, ಜೀವರತ್ನ ನಾಗಪಟ್ಟಣ, ಕ್ರೂಸ್, ಕಾರ್ತಿಕ್, ರವಿಕುಮಾರ್ ಅಡ್ಯನಡ್ಕ, ಶಶಿಕುಮಾರ್, ಭೋಜರಾಜ ಕನ್ಯಾರು, ರವಿಕುಮಾರ್ ಅಡ್ಯನಡ್ಕ, ಶರತ್ ಕುಮಾರ್, ಆನಂದ, ರೆಪ್ಪೋ ಬ್ಯಾಂಕಿನ ತ್ಯಾಗರಾಜ್, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ಬೇಡಿಕೆ ಈಡೇರಬೇಕು ಮತ್ತು ಕಾರ್ಮಿಕರಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಇಂದು ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ. ಮಾತಿಗೆ ತಕ್ಕಂತೆ ಅಧಿಕಾರಿಗಳು ಕೂಡಲೇ ಬಂದನೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.ಕಾರ್ಮಿಕರ ಬೇಡಿಕೆಗಳಲ್ಲಿ ಮುಖ್ಯವಾಗಿ ‘ನಿರಂತರ ಕಾರ್ಮಿಕರನ್ನು ಕಾಯಂಗೊಳಿಸುವುದು ಮತ್ತು ಕಾರ್ಮಿಕರಿಗೆ ಬಾಕಿ ವೇತನ ಪಾವತಿಸುವುದು, ಕಾರ್ಮಿಕರ ಕುಟುಂಬದಲ್ಲಿ ಹಿರಿಯರು ನಿಧನರಾದರೆ ಅನುಕಂಪದ ಆಧಾರಿತದಲ್ಲಿ ಕುಟುಂಬದ ಸದಸ್ಯರಿಗೆ ಕೆಲಸವನ್ನು ನೀಡಬೇಕು, ಮೇಸ್ತ್ರಿ ಕಾರ್ಮಿಕರ ನೇಮಕಾತಿ ಗೊಳಿಸಬೇಕು, ಅಲ್ಲದೆ ಇ ಎಸ್ ಐ ಸೌಲಭ್ಯವನ್ನು ಎಲ್ಲಾ ಕಾರ್ಮಿಕರಿಗೆ ನೀಡುವ ಮೂಲಕ ಕಾರ್ಮಿಕರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.ಪ್ರತಿಭಟನೆಯಲ್ಲಿ ಪುತ್ತೂರು ಬೆಳ್ಳಾರೆ, ಸುಬ್ರಹ್ಮಣ್ಯ, ಕಡಬ, ಸುಳ್ಯ ಸೇರಿದಂತೆ ಸುಮಾರು ೩೦ ಕ್ಕೂ ಹೆಚ್ಚು ಕಾಲೋನಿಗಳಿಂದ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.










































