ವಾಷಿಂಗ್ಟನ್: ಅಮೆರಿಕ ಮುಂದಿಟ್ಟಿರುವ ಬೇಡಿಕೆಗಳನ್ನು ನಿಗದಿತ ಗಡುವಿನೊಳಗೆ ಒಪ್ಪದಿದ್ದರೆ ಇರಾನ್ ನಾಗರಿಕತೆಯ ಸರ್ವನಾಶವಾಗಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ. ಈ ನಡುವೆ ಭಾರತೀಯ ದೂತವಾಸ ಕಚೇರಿ ಭಾರತೀಯ ಜನತೆಗೆ ಎಚ್ಚರಿಕೆ ನೀಡಿದೆ.
‘ತಾನು ನೀಡಿರುವ ಗಡುವಿನ ಒಳಗಾಗಿ ಕದನ ವಿರಾಮ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕು. ಇಲ್ಲದೇ ಹೋದಲ್ಲಿ ಈ ರಾತ್ರಿಯೇ ಇಡೀ ನಾಗರಿಕತೆಯೇ ಸರ್ವನಾಶವಾಗಲಿದೆ’ ಎಂದು ಬೆದರಿಕೆ ಹಾಕಿದ್ದಾರೆ.
‘ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ.ಮತ್ತೆಂದು ಮರಳುವುದಿಲ್ಲ. ಹಾಗಾಗಬೇಕೆಂದು ನಾನು ಬಯಸುವುದಿಲ್ಲ. ಆದರೆ ಬಹುಶಃ ಅದು ಸಂಭವಿಸಲಿದೆ.ಇರಾನ್ನಲ್ಲಿ ಸಂಪೂರ್ಣ ಆಡಳಿತ ಬದಲಾವಣೆಯಾಗಲಿದೆ. ಕ್ರಾಂತಿಕಾರಿಯಾಗಿ ಅದ್ಭುತವಾದದ್ದು ಸಂಭವಿಸಲಿದೆ. ಅಲ್ಲಿ ವಿಭಿನ್ನ.ಬುದ್ಧಿವಂತ ಹಾಗೂ ಕಡಿಮೆ ಮೂಲಭೂತವಾದಿಗಳು ಮೇಲುಗೈ ಸಾಧಿಸಲಿದ್ದಾರೆ. ಯಾರಿಗೆ ಗೊತ್ತು? ಇಂದು ರಾತ್ರಿಯೇ ಸ್ಪಷ್ಟವಾಗಲಿದೆ.
ಜಗತ್ತಿನ ಇತಿಹಾಸದ ಅತ್ಯಂತ ಸಂಕೀರ್ಣ ಕ್ಷಣಗಳಲ್ಲಿ ಒಂದಾಗಿದೆ. 47 ವರ್ಷಗಳ ಭ್ರಷ್ಟಾಚಾರ, ಸುಲಿಗೆ, ಸಾವಿಗೆ ಕೊನೆಯಾಗಲಿದೆ. ಇರಾನ್ನ ಮಹಾನ್ ಜನರನ್ನು ದೇವರು ಆಶೀರ್ವದಿಸಲಿ’ ಎಂದು ಸಾಮಾಜಿಕ ಮಾಧ್ಯಮ ಟ್ರುಥ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯರಿಗೆ ಎಚ್ಚರಿಕೆ : ಭಾರತೀಯ ದೂತವಾಸಕಚೇರಿ ಇರಾನ್ ನಲ್ಲಿ ವಾಸಿಸುವ ಭಾರತೀಯ ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿ ಹೆಲ್ಸ್ ಲೈನ್ ತೆರೆದಿದೆ.ಮುಂದಿನ 48 ಗಂಟೆ ಇರುವಲ್ಲಿಯೇ ಇರುವಂತೆ, ವಿದ್ಯುತ್ ಸಂಪರ್ಕ ಉಪಯೋಗಿಸದಂತೆ ಎಚ್ಚರಿಕೆ ನೀಡಿದೆ. ಮೇಲ್ಪಾವಣಿ ಹಾಗೂ ತೆರೆದ ಸ್ಥಳಗಳಲ್ಲಿ ನಿಲ್ಲದೆ, ಮನೆಯೊಳಗೆ ಇರುವಂತೆ ಎಚ್ಚರಿಸಿದೆ. ಏನೇ ಸಮಸ್ಯೆಯಾದರೂ ಭಾರತೀಯ ದೂತವಾಸ ಕಚೇರಿಗೆ ಸಂಪರ್ಕಿಸುವಂತೆ ತಿಳಿಸಿದೆ. ಭಾರತೀಯ ವಿದೇಶಾಂಗ ಕಚೇರಿಯ ಸಂಪರ್ಕ ಸಂಖ್ಯೆಯನ್ನು ಪ್ರಕಟಿಸಿದೆ.










































