ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆ, ಸಂಚಾರ ವಿಭಾಗದ ಪೊಲೀಸ್ ಸಿಬ್ಬಂದಿಗಳ ಕರ್ತವ್ಯದ ಸ್ಥಳ(ಸಿಗ್ನಲ್ಗಳಲ್ಲಿ ತಾತ್ಕಾಲಿಕ ನೆರಳು, ಮಾಸ್ಕ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾಎಂ.ಎ.ಸಲೀಂ ಅವರಿಗೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಪತ್ರ ಬರೆದಿದ್ದಾರೆ.ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಸರಕಾರದ ಇತರ ಎಲ್ಲಾ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯು ವಿಭಿನ್ನವಾಗಿದ್ದು ತುರ್ತುಸೇವೆಯಾಗಿರುವುದರಿಂದ ದಿನದ 24 ಗಂಟೆಗಳ ಕಾಲ ಸನ್ನದ್ದರಾಗಿ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಪ್ರಸ್ತುತ ಐದು ಕೋಟಿಗೂ ಅಧಿಕ ಜನಸಂಖ್ಯೆ ವಾಸಿಸುವ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದ್ದು, ವಾಹನಗಳಿಂದ ಹೊರಸೂಸುವ ಹೊಗೆ, ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದ ಬೃಹತ್ ಮಟ್ಟದ ಮಣ್ಣಿನ ಧೂಳು ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ಆವರಿಸುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಾಹನಗಳಿಂದ ರಸ್ತೆಗಳು ಧೂಳುಮಯವಾಗಿದ್ದು ಉಸಿರಾಡಲು ಉತ್ತಮ ಗುಣಮಟ್ಟದ ಗಾಳಿ ಸಿಗದೇ ಡಸ್ಟ್ ಅಲರ್ಜಿಯಂತಹ ರೋಗಗಳು ಸೇರಿದಂತೆ ಶ್ವಾಸಕೋಶಕ್ಕೆ ಹಾನಿಯಾಗುವಷ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಚಾರ ನಿಯಂತ್ರಣ, ಅಪರಾಧಗಳನ್ನು ತಡೆಗಟ್ಟುವ ಪೊಲೀಸ್ ಇಲಾಖೆಯ ಸಿಬ್ಬಂದಿ ಇಂತಹ ದುಸ್ಥಿತಿಯ ಪರಿಸರದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಬಿಸಿಲಿನ ತಾಪ ಹೆಚ್ಚಿರುವ ಬೆಳಗಾವಿ ವಲಯ ಮತ್ತು ಕಲಬುರಗಿ ವಲಯದ ಜಿಲ್ಲೆಗಳ ಪೊಲೀಸ್ ಇಲಾಖೆ ಹೊರತು ಪಡಿಸಿ ಎಲ್ಲ ಸರಕಾರಿ ಕಚೇರಿಗಳಿಗೆ ಎಪ್ರಿಲ್ ಮತ್ತು ಮೇ ತಿಂಗಳ ಅಂತ್ಯದವರೆಗೆ ಕರ್ತವ್ಯದ ವೇಳೆಯನ್ನು ಬದಲಾಯಿಸಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದ್ದರಿಂದ, ಸದರಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದ ಸಂಚಾರ ವಿಭಾಗದಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ತ್ವರಿತವಾಗಿ ಸಿಗ್ನಲ್ಗಳಲ್ಲಿ ಪ್ಯಾರಾಚೂಟ್ ಕೊಡೆಗಳನ್ನು ಮತ್ತು ವಾಯುಮಾಲಿನ್ಯದ ರಕ್ಷಣೆ ಪಡೆಯಲು ಉತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ಹಾಗೂ ಬೇಸಿಗೆ ಕಾಲ ಮುಗಿಯುವವರೆಗೆ ದೇಹ ಡಿಹೈಡೇಟೆಡ್ ಆಗದಂತೆ ನಿರಂತರ ಕುಡಿಯುವ ನೀರು ಮತ್ತು ಎಲೆಕ್ಟೋಲೈಟ್ ಪಾನೀಯಗಳನ್ನು ನೀಡುವ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮೋಹನ್ ಕುಮಾರ್ ಅವರು ಮನವಿ ಮಾಡಿದ್ದಾರೆ.










































