ಕರ್ನಾಟಕ ಸರ್ಕಾರವು ಶನಿವಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ರಷ್ಟು ಹೆಚ್ಚಳ ಮಾಡಿದ್ದು, ಪರಿಷ್ಕೃತ ರಚನೆಯಡಿ ಬೆಂಗಳೂರಿನ ಕಾರ್ಮಿಕರು ಇನ್ಮುಂದೆ ಮಾಸಿಕ ಕನಿಷ್ಠ 23,376 ರೂ. ವೇತನವನ್ನು ಪಡೆಯಲಿದ್ದಾರೆ.ಈ ನಿರ್ಧಾರವನ್ನು ಪ್ರಕಟಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಈ ಕ್ರಮವು ಕಾರ್ಮಿಕರ ಆರ್ಥಿಕ ಭದ್ರತೆಯನ್ನು ಬಲಪಡಿಸಲಿದೆ ಮತ್ತು ರಾಜ್ಯಾದ್ಯಂತ ಇರುವ ಕಾರ್ಮಿಕ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಿದೆ ಎಂದು ಹೇಳಿದ್ದಾರೆ.ಪರಿಷ್ಕೃತ ರಚನೆಯ ಪ್ರಕಾರ, ಬೆಂಗಳೂರಿನಲ್ಲಿರುವ ನುರಿತ ಕಾರ್ಮಿಕರು ಪ್ರತಿ ತಿಂಗಳು 31,114 ರೂ. ಪಡೆಯಲು ಅರ್ಹರಾಗಿರುತ್ತಾರೆ. ಇನ್ನು ಕರ್ನಾಟಕದ ಇತರ ಭಾಗಗಳಲ್ಲಿ ಸ್ಥಳ ಮತ್ತು ವರ್ಗಕ್ಕೆ ಅನುಗುಣವಾಗಿ ಕನಿಷ್ಠ ವೇತನವು 19,300 ರೂ. ನಿಂದ 21,251 ರೂ. ವರೆಗೆ ಇರಲಿದೆ.
ಶೇ.60 ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಅಧಿಕೃತ ಅಧಿಸೂಚನೆ
ನಮ್ಮ ಸರ್ಕಾರವು ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ರಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಇದರ ಮೂಲಕ, ರಾಜ್ಯದ ಕಾರ್ಮಿಕ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆಎಂದು ಲಾಡ್ ತಮ್ಮ ‘ಎಕ್ಸ್’ (X) ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಸಂಘಟಿತ ವಲಯದ ಲಕ್ಷಾಂತರ ಮಂದಿಗೆ ಆರ್ಥಿಕ ಭದ್ರತೆ
ಪರಿಷ್ಕೃತ ವೇತನವು ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಅಧಿಸೂಚಿತ ವಲಯಗಳ ನೌಕರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಹಾಗೂ ಲಕ್ಷಾಂತರ ಕಾರ್ಮಿಕರನ್ನು ಹೆಚ್ಚು ವ್ಯವಸ್ಥಿತ ಚೌಕಟ್ಟಿನಡಿಗೆ ತರಲಿದೆ. ವೇತನ ವ್ಯವಸ್ಥೆಯಲ್ಲಿನ ಸಾಂಸ್ಥಿಕ ಬದಲಾವಣೆಯನ್ನು ಪ್ರಕಟಿಸಿದ ಸಚಿವರು, ಸರ್ಕಾರವು ಈ ಹಿಂದಿನ ನಾಲ್ಕು ವಲಯಗಳ ವರ್ಗೀಕರಣ ಮಾದರಿಯನ್ನು ರದ್ದುಗೊಳಿಸಿದೆ ಮತ್ತು ಇದೇ ಮೊದಲ ಬಾರಿಗೆ ಎಲ್ಲಾ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತಂದಿದೆ ಎಂದು ಹೇಳಿದ್ದಾರೆ.
81 ನಿಗದಿತ ಉದ್ಯೋಗಗಳಿಗೆ ಏಕೀಕೃತ ವೇತನ ವ್ಯವಸ್ಥೆ
ಲಾಡ್ ಪ್ರಕಾರ, ಪರಿಷ್ಕೃತ ವೇತನ ರಚನೆಯು ಕರ್ನಾಟಕದಾದ್ಯಂತ 81 ನಿಗದಿತ ಉದ್ಯೋಗಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಈ ಅಧಿಸೂಚನೆಯು ರಾಜ್ಯಾದ್ಯಂತ ಇರುವ ಅಸಂಘಟಿತ ವಲಯ ಮತ್ತು ಇತರ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಕನಿಷ್ಠ ವೇತನವನ್ನು ನಿರ್ಧರಿಸುವಾಗ, ಸುಪ್ರೀಂ ಕೋರ್ಟ್ ಪೀಠದ ನಿರ್ದೇಶನಗಳನ್ನು ಪಾಲಿಸಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಕಾರ್ಮಿಕ ಇಲಾಖೆಯ ಈ ಪ್ರಸ್ತಾವನೆಗೆ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ತಜ್ಞರಿಗೆ ಲಾಡ್ ಧನ್ಯವಾದ ಅರ್ಪಿಸಿದ್ದಾರೆ.













































