ಶಿವಮೊಗ್ಗ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಡುಶಿರಾಲಿಯ ಬೆಂಗ್ರೆಯ ಅಳ್ಳೆಕೋಡಿಯಲ್ಲಿ ನದಿಗೆ ಇಳಿದಿದ್ದ ಎಂಟು ಜನ ಅಮಾಯಕರು ಭೀಕರ ದುರಂತಕ್ಕೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರಿ ಸುದ್ದಿ ಕೇಳಿ ನನಗೆ ಆಘಾತ ಉಂಟಾಗಿದೆ.ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ, ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ದಿಢೀರನೆ ಹೆಚ್ಚಾಗಿ ಹಾಗೂ ಸಮುದ್ರದ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರಾದ ಲಕ್ಷ್ಮಿ ಮಹಾದೇವ ನಾಯ್ಕ, ಉಮೇಶ್ ನಾಯ್ಕ, ಲಕ್ಷ್ಮಿ ನಾಯ್ಕ, ಲಕ್ಷ್ಮಿ ಅಣ್ಣಪ್ಪ ನಾಯ್ಕ, ಲಕ್ಷ್ಮಿ ಶಿವರಾಮು ನಾಯ್ಕ, ಜ್ಯೋತಿ ನಾಗಪ್ಪ ನಾಯ್ಕ, ಮಾಲತಿ ನಾಯ್ಕ ಹಾಗೂ ಮಾಸ್ತಮ್ಮ ನಾಯ್ಕ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಘಟನೆಯಲ್ಲಿ ಅಪಾಯದಿಂದ ಪಾರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗರತ್ನಾ ಮತ್ತು ಮಹಾದೇವಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ನದಿ ಪಾತ್ರದ ನಿವಾಸಿಗಳು ನದಿ, ಹಳ್ಳ-ಕೊಳ್ಳಗಳಿಗೆ ಇಳಿಯುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿ ವಿನಂತಿಸುತ್ತೇನೆ.
ಬಿ.ವೈ. ರಾಘವೇಂದ್ರಸಂಸದರು,
ಶಿವಮೊಗ್ಗ ಲೋಕಸಭಾ ಕ್ಷೇತ್ರ













































