ಚೆನ್ನೈ: ವಿಧಾನಸಭಾ ಚುನಾವಣೆ ಬೆನ್ನಲ್ಲೇ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸೋಮವಾರ ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಮಧುರಾಂತಕಂ ಕ್ಷೇತ್ರದ ಮರಗದಂ ಕುಮಾರವೇಲ್, ಧಾರಾಪುರಂ ಕ್ಷೇತ್ರದ ಸತ್ಯಭಾಮಾ ಮತ್ತು ಪೆರುಂದುರೈ ಕ್ಷೇತ್ರದ ಜಯಕುಮಾರ್ ಇವರು ರಾಜೀನಾಮೆ ನೀಡಿದ ಶಾಸಕರು.
ಇವರು, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ ಎಐಎಡಿಎಂಕೆ ಬಂಡಾಯ ಬಣದ ಭಾಗವಾಗಿದ್ದು, ಇತ್ತೀಚೆಗೆ ನಡೆದ ವಿಶ್ವಾಸಮತ ಯಾಚನೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ಮೈತ್ರಿಕೂಟದ ಪರವಾಗಿ ಮತ ಚಲಾಯಿಸಿದ್ದರು.
ಸಚಿವ ಆಧವ್ ಅರ್ಜುನ್ ಭೇಟಿ : ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಈ ಮೂವರು ಶಾಸಕರು ಸಚಿವ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಪ್ರಮುಖ ನಾಯಕ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ, ಇವರು ಶೀಘ್ರದಲ್ಲೇ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವನ್ನು ಅಧಿಕೃತವಾಗಿ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.













































