ಲಕ್ಕೋ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಟಿಕೆ ಕೊಡದಿದ್ದರೆ ಅದನ್ನೇ ಮುರಿಯಲು ಯತ್ನಿಸುವ ಹಠಮಾರಿ ಮಗುವಿಗೆ ರಾಹುಲ್ ಗಾಂಧಿ ಅವರನ್ನು ಹೋಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೌರ್ಯ, ‘ದೇಶದ ಜನರ ಭರವಸೆ, ನಂಬಿಕೆಯ ಮತ್ತೊಂದು ಹೆಸರೇ ಪ್ರಧಾನಿ ನರೇಂದ್ರ ಮೋದಿ. ಅವರಿಗೆ ದೇಶದಲ್ಲಿ ಯಾವುದೇ ಪರ್ಯಾಯ ಶಕ್ತಿ ಇಲ್ಲ ಎಂಬುದನ್ನು ಕಾಂಗ್ರೆಸ್ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ.
ಕಳೆದ 12 ವರ್ಷಗಳಿಂದ ದೇಶದ ಜನರ ವಿಶ್ವಾಸ ಗಳಿಸುವಲ್ಲಿ ಸತತವಾಗಿ ವಿಫಲರಾಗಿರುವ ರಾಹುಲ್ ಗಾಂಧಿ, ಈಗ ‘ವಿದೇಶಿ ಟೂಲ್ಕಿಟ್ ಗ್ಯಾಂಗ್’ ಮೂಲಕ ದೇಶವನ್ನು ಅರಾಜಕತೆಯತ್ತ ತಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೌರ್ಯ ಆರೋಪಿಸಿದ್ದಾರೆ.’ವಾಸ್ತವವಾಗಿ, ರಾಹುಲ್ ಗಾಂಧಿ ಅವರ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಮಗುವೊಂದಕ್ಕೆ ತಾನು ಕೇಳಿದ ಆಟಿಕೆ ಕೊಡದಿದ್ದರೆ, ಅದು ಆ ಆಟಿಕೆಯನ್ನೇ ಮುರಿದು ಹಾಕಲು ಪ್ರಯತ್ನಿಸುತ್ತದಲ್ಲ ಹಾಗೆ ಆಗಿದೆ’ ಎಂದು ಮೌರ್ಯ ವ್ಯಂಗ್ಯವಾಡಿದ್ದಾರೆ.













































