ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ನಲ್ಲಿ ಇತ್ತೀಚೆಗೆ ನಡೆದ ಮೂವರ ಶೂಟೌಟ್ ಪ್ರಕರಣದ ಬೆನ್ನಲ್ಲೇ, ತೋಮಿಯಾರ್ ಪಾಳ್ಯದ ಬಳಿ ದುಷ್ಕರ್ಮಿಗಳು ಸೋಲಾರ್ ತಂತಿ ಬೇಲಿ ಹಾಗೂ ಗೇಟ್ಗಳನ್ನು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಾಡಿನಿಂದ ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆಯು ತೋಮಿಯಾರ್ ಪಾಳ್ಯದ ‘ಡಿ ಲೈನ್’ನಲ್ಲಿ ಸೋಲಾರ್ ಫೆನ್ಸಿಂಗ್, ಗೇಟ್ ಹಾಗೂ ಸ್ವಿಚ್ಗಳನ್ನು ಅಳವಡಿಸಿತ್ತು. ಇದೀಗ ಇವುಗಳನ್ನು ನಾಶಪಡಿಸಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮತ್ತೆ ಎಡೆಮಾಡಿಕೊಟ್ಟಂತಾಗಿದೆ.
ಕಾಡಾನೆಗಳು ಕೃಷಿ ಜಮೀನುಗಳಿಗೆ ನುಗ್ಗದಂತೆ ತಡೆಯಲು ನಿರ್ಮಿಸಿದ್ದ ಈ ಫೆನ್ಸಿಂಗ್ ಧ್ವಂಸದ ಹಿಂದೆ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಹುನ್ನಾರ ಅಡಗಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಈ ಗೇಟ್ ತೆರವಾದರೆ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತವೆ; ಆಗ ಪ್ರಾಣಿಗಳನ್ನು ಓಡಿಸಲು ಅನಿವಾರ್ಯವಾಗಿ ಗ್ರಾಮದೊಳಗೆ ಬರುವ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡುವುದು ದುಷ್ಕರ್ಮಿಗಳ ಸಂಚಾಗಿರಬಹುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.














































