ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಹಾಗೂ ಅವರ ಸಂಬಂಧಿಕರು, ಆಪ್ತರಿಗೆ ಸೇರಿದ 15 ಮನೆಗಳ ಮೇಲೆ ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ ವಾಸವಿರುವ ಹಾಗೂ ವಿವಿಧ ಉದ್ಯಮಗಳಲ್ಲಿ ಪಾಲುದಾರರಾದ ಸತೀಶ ಅವರ ಆಪ್ತರಿಗೂ ಇ.ಡಿ ಗಾಳ ಹಾಕಿದೆ.ಬೆಳಗಾವಿ ನಗರದಲ್ಲಿರುವ ಸತೀಶ ಅವರ ಭಾಮೈದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಮಂಜುನಾಥ ಮನೆ ಮೇಲೆ ಎರಡನೇ ಬಾರಿ ದಾಳಿ ಮಾಡಲಾಗಿದೆ.ಇದೇ ಜೂನ್ 24ರಂದು ಮಂಜುನಾಥ ಮನೆ, ಕಚೇರಿ ಮೇಲೆ ದಾಳಿ ನಡೆದಿತ್ತು. ಆಗ ₹13.3 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿತ್ತು. ₹5.5 ಕೋಟಿ ನಗದು, ₹7.8 ಕೋಟಿ ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ, ಆಸ್ತಿಪತ್ರಗಳು ಪತ್ತೆಯಾಗಿದ್ದವು. ಮಂಜುನಾಥ ಹಾಗೂ ಸತೀಶ ಅವರ ಪುತ್ರ ರಾಹುಲ್ ಜಾರಕಿಹೊಳಿ ಹಲವು ಉದ್ಯಮಗಳಲ್ಲಿ ಪಾಲುದಾರ ಆಗಿದ್ದಾರೆ ಎಂಬ ವಿಷಯವೂ ದಾಖಲೆ ಪರಿಶೀಲನೆ ವೇಳೆ ಗೊತ್ತಾಗಿತ್ತು.ಮತ್ತೊಮ್ಮೆ ಅವರದೇ ಮನೆ ಮೇಲೆ ದಾಳಿ ಮಾಡಲಾಗಿದೆ.
ನಗರದ ಲಕ್ಷ್ಮೀಟೇಕಡಿ ಪ್ರದೇಶದಲ್ಲಿರುವ ಸತೀಶ ಅವರ ಆಪ್ತ ಡಾ.ಗಿರೀಶ ಸೋನವಾಲ್ಕರ ಮನೆ ಮೇಲೂ ದಾಳಿ ನಡೆಸಿದ್ದು, ಪರಿಶೀಲನೆ ಶುರುವಾಗಿದೆ.ಬೆಳಗಾವಿಯ ರಾಜು ಧರಗಶೆಟ್ಟಿ, ವಿಠಲ್ ಪರಸಣ್ಣವರ್ ಮನೆಗಳನ್ನೂ ಜಾಲಾಡಲಾಗಿದೆ. ಈ ಇಬ್ಬರೂ ಉದ್ಯಮಿಗಳು ಸಚಿವ ಸತೀಶ ಆಪ್ತರಾಗಿದ್ದಾರೆ.ಇನ್ನೊಂದೆಡೆ, ಸತೀಶ ಅವರ ಮೂಲ ನೆಲೆ ಗೋಕಾಕ ನಗರದ ಹಿಲ್ ಗಾರ್ಡನ್ನಿನಲ್ಲಿರುವ ಅವರ ಸ್ವಂತ ಮನೆ ಮೇಲೂ ದಾಳಿ ಮುಂದುವರಿದಿದೆ. ಗೋಕಾಕ ನಗರದ ಅವರ ಇಬ್ಬರು ಆಪ್ತರಿಗೂ ಗಾಳ ಹಾಕಲಾಗಿದೆ.ದಾಳಿಯಲ್ಲಿ ಬೆಂಗಳೂರು ಹಾಗೂ ಗೋವಾದ ಇ.ಡಿ ಅಧಿಕಾರಿಗಳ ತಂಡವಿದೆ. ಅರೆಸೇನಾ ತುಕಡಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ.
















































