ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿಲ್ಲ. ಆದರೆ ಆಹಾರ ಪದ್ಧತಿಯ ವಿಚಾರವಾಗಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ.
ಸಾಧು-ಸಂತರು ಹಾಗೂ ವಿಎಚ್ಪಿ ನಾಯಕರು ದುರ್ಗಾಪೂಜೆ ಆಚರಣೆ ವೇಳೆ ಮಾಂಸಾಹಾರ ಮಾರಾಟ ಮಾಡಬೇಡಿ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಪ್ರಜಾವಾಣಿಯ ಸಹೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ಗೆ ನೀಡಿರುವ ಸಂದರ್ಶನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ದುರ್ಗಾಪೂಜೆಯ ವೇಳೆ ‘ಮೂರ್ತಿಗಳ ಬಳಿ ಮಾಂಸಾಹಾರ ಮಾರಾಟ ಮಾಡಬೇಡಿ’ ಎಂದು ಮಧ್ಯಪ್ರದೇಶದ ಧಾರ್ಮಿಕ ಮುಖಂಡ ಬಾಬಾ ಬಾಗೇಶ್ವರ್ (ಧೀರೇಂದ್ರ ಶಾಸ್ತ್ರಿ) ಹೇಳಿರುವುದು ವಿವಾದಕ್ಕೆ ಕಾರಣವಾಗಿದೆಯಲ್ಲ?
14-ಇಲ್ಲಿ ಯಾವುದೇ ವಿವಾದವಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಭಾರತದಲ್ಲಿ ಹಲವರು ಸಸ್ಯಾಹಾರಿಗಳಿದ್ದಾರೆ. ಹಾಗೆಂದು ಅವರು ಮಾಂಸಾಹಾರಿಗಳೊಂದಿಗೆ ಶತ್ರುತ್ವ ಬೆಳೆಸಿಕೊಳ್ಳುತ್ತಾರೆಯೇ? ಬಂಗಾಳಿಗಳಿಗೆ ಮೀನು ಇಲ್ಲದೆ ಬದುಕಲು ಸಾಧ್ಯವೇ ಇಲ್ಲ. ಅವರು ಮೀನು ತಿನ್ನುತ್ತಾರೆ, ಜೊತೆಗೆ ಪೂರಿ ಮತ್ತು ಮಟನ್ ಸೇವಿಸುತ್ತಾರೆ. ಆದರೆ, ಅಷ್ಟಮಿಯ ದಿನದಂದು ಸಸ್ಯಾಹಾರ ಸೇವಿಸುವ ಪದ್ಧತಿಯಿದ್ದು, ಅದನ್ನು ಮುಂದುವರಿಸಲಿದ್ದಾರೆ. ಆಹಾರದ ಬಗ್ಗೆ ಜನರು ವಿಭಿನ್ನ ಅಭಿಪ್ರಾಯ ಹೊಂದಿರಬಹುದು, ಆದರೆ ಅದಕ್ಕೂ ಬಿಜೆಪಿಗೂ ಏನು ಸಂಬಂಧ?
ಆದರೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಇತ್ತೀಚೆಗೆ ಕೋಲ್ಕತ್ತದಲ್ಲಿ ಬಾಬಾ ಅವರನ್ನು ಭೇಟಿಯಾಗಿ ಸ್ವಾಗತಿಸಿದ್ದಾರಲ್ಲ?
-ಯಾರು ಯಾರನ್ನಾದರೂ ಭೇಟಿಯಾಗಬಹುದು. ಆಯೋಜಕರು ಆಹ್ವಾನಿಸಿದ್ದರಿಂದ ನಾನೂ ಹೋಗಿ ಭೇಟಿಯಾಗಿದ್ದೆ. ಅದರರ್ಥ ಧೀರೇಂದ್ರ ಶಾಸ್ತ್ರಿ ಅವರು ಬಿಜೆಪಿಯ ವಕ್ತಾರರು ಎಂದಲ್ಲ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ಇದನ್ನೇ ಆರೋಪಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಹಾರ ಪದ್ಧತಿಯನ್ನು ಹೇರುವವರಿಗೆ ಅವಕಾಶ ಮಾಡಿಕೊಡಲಾಗಿದೆಯೇ?
-ತೃಣಮೂಲ ಕಾಂಗ್ರೆಸ್ ಎಂಬ ಪಕ್ಷವೇ ಇಲ್ಲ. ನೀವು ಯಾವ ಟಿಎಂಸಿ ಬಗ್ಗೆ ಮಾತನಾಡುತ್ತಿದ್ದೀರಿ? ಆ ಪಕ್ಷ ಈಗ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದೆ.
ಸರ್ಕಾರಿ ಜಾಹೀರಾತಿನಲ್ಲಿ ದುರ್ಗಾದೇವಿಯನ್ನು 11 ಕೈಗಳೊಂದಿಗೆ ಚಿತ್ರಿಸಿರುವುದು ಬಿಜೆಪಿಗೆ ಮುಜುಗರ ತಂದಿದೆಯಲ್ಲ?
-ಅದು ಮುದ್ರಣ ದೋಷ ಇರಬೇಕು ಎಂದು ಭಾವಿಸುತ್ತೇನೆ. ಇದು ನಿಜಕ್ಕೂ ವಿಷಾದನೀಯ. ಅದನ್ನು ಯಾರು ಮುದ್ರಿಸಿದ್ದಾರೆ ಎಂಬುದನ್ನು ಪರಿಶೀಲಿಸಿದ್ದು, ಬದಲಾವಣೆಗೆ ಸೂಚಿಸಲಾಗಿದೆ.
ಇದರಿಂದ ಬಂಗಾಳದ ಮೇಲೆ ಹೊರಗಿನ ಸಂಸ್ಕೃತಿ ಮತ್ತು ಪ್ರಾಬಲ್ಯವನ್ನು ಹೇರಲಾಗುತ್ತಿದೆ ಎಂಬ ಆತಂಕ ಮೂಡುವುದಿಲ್ಲವೇ?
-ಯಾವುದೇ ಪ್ರಾಬಲ್ಯ ಹೇರುತ್ತಿಲ್ಲ. 34 ವರ್ಷಗಳ ಎಡಪಂಥೀಯರ ಆಡಳಿತದ ನಂತರ ಬಂಗಾಳ ಮತ್ತೊಂದು ಬಗೆಯ ಪ್ರಾಬಲ್ಯಕ್ಕೆ ಜಾರಿತು. ಕಳೆದ 49 ವರ್ಷಗಳಿಂದ ಪಶ್ಚಿಮ ಬಂಗಾಳದ ಜನತೆ ರಾಜಕೀಯ ಪ್ರಾಬಲ್ಯವನ್ನಷ್ಟೇ ಅನುಭವಿಸಿದ್ದಾರೆ. ಬಿಜೆಪಿ ಬಂದ ಮೇಲೆ ಈ ಸ್ಥಿತಿ ಬದಲಾಗಲಿದೆ. ಬಂಗಾಳವನ್ನು ರಾಜಕೀಯ ಮುಕ್ತವಾದ ಸಮಾಜವನ್ನಾಗಿ ಮಾಡುವುದು ನಮ್ಮ ಉದ್ದೇಶ.
14ಅಷ್ಟಮಿಯ ದಿನದಂದು ಮದ್ಯಪಾನ ಮತ್ತು ಡಿಜೆ ನಿಷೇಧಿಸುವ ಕುರಿತು ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯನ್ನು ನೀವು ಒಪ್ಪುತ್ತೀರಾ?
-ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾರಾದರೂ ಕುಡಿದು ಗಲಾಟೆ ಸೃಷ್ಟಿಸಿದರೆ ಅದನ್ನು ಖಂಡಿತ ನಿಯಂತ್ರಿಸಬೇಕು.
ನಿಮ್ಮ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಆದ್ಯತೆ ಮತ್ತು ಗಮನ ಏನಿರಬೇಕು?
ಹಿಂದೆ ಸಂಪೂರ್ಣವಾಗಿ ಹಾಳಾಗಿದ್ದ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದು ಮೊದಲ ಆದ್ಯತೆ. ಈ ಹಿಂದೆ ಪಶ್ಚಿಮ ಬಂಗಾಳ ಹೂಡಿಕೆ ಸ್ನೇಹಿಯಲ್ಲದ ರಾಜ್ಯವಾಗಿ ಮಾರ್ಪಟ್ಟಿತ್ತು. ಹೊಸ ಕೈಗಾರಿಕಾ ನೀತಿಗೆ ಭೂಮಿ ಅತ್ಯಗತ್ಯ. 2011ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದಾಗ ಒಂದು ಚದರ ಅಡಿ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದಿದ್ದರು. ಹಾಗಾಗಿ ಹೂಡಿಕೆದಾರರು ನೇರವಾಗಿ ರೈತರಿಂದಲೇ ಭೂಮಿ ಖರೀದಿಸಬೇಕಾದ ಅನಿವಾರ್ಯತೆ ಇತ್ತು. ರಾಜ್ಯದಲ್ಲಿ ಶೇ 82ರಷ್ಟು ಕೃಷಿ ಭೂಮಿ ಸಣ್ಣ ರೈತರ ವಶದಲ್ಲಿದೆ. ಆದ್ದರಿಂದ ಸಮಗ್ರ ಭೂ ನೀತಿ ಇಲ್ಲದೆ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ನಾವು ಈ ವ್ಯವಸ್ಥೆಯನ್ನು ಬದಲಾಯಿಸಲು ಶ್ರಮಿಸುತ್ತಿದ್ದೇವೆ.
2029ರ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಮುಖ್ಯ ಎದುರಾಳಿ ಯಾರು? ಮಮತಾ ಬ್ಯಾನರ್ಜಿ, ಸಿಪಿಎಂ ಅಥವಾ ಕಾಂಗ್ರೆಸ್?
-ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಜವಾಬ್ದಾರಿಯುತ ಹಾಗೂ ಪ್ರಬಲ ವಿರೋಧ ಪಕ್ಷ ಇರಬೇಕು. ಆದರೆ ಪ್ರಸ್ತುತ ಅಂತಹ ಯಾವುದೇ ಪಕ್ಷ ನಮಗೆ ಕಾಣದಿರುವುದು ದುರಂತ. ತೃಣಮೂಲ ಈಗ ನಿರ್ಮೂಲವಾಗಿದೆ. ಸಿಪಿಐ (ಎಂ) ಪಕ್ಷವನ್ನು ಜನರು ಈಗಾಗಲೇ ನೋಡಿ, ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
















































