ಮಂಗಳೂರು : ಬೀದಿ ಬದಿ ಕಿತ್ತಳೆ ಹಣ್ಣನ್ನು ಮಾರಾಟ ಮಾಡಿ ಊರಿಗೆ ಶಾಲೆ ಕಟ್ಟಿಸಿ ಹೆಸರುವಾಸಿಯಾಗಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ಸೋಮವಾರ ನೋಟಿಸ್ ಜಾರಿ ಮಾಡಿದ್ದು, ಬಳಿಕ ಹಿಂಪಡೆದಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರದ 2002ರ ಮತದಾರರ ಪಟ್ಟಿಯಲ್ಲಿ ಹರೇಕಳ ಹಾಜಬ್ಬ ಅವರ ಹೆಸರು ‘ಹಾಜಬ್ಬ’ ಎಂದು ಮಾತ್ರ ನಮೂದಾಗಿತ್ತು. ಅವರು ಈಗ ಹೊಂದಿರುವ ಪಡಿತರ ಚೀಟಿ, ಆಧಾರ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿಗಳಲ್ಲಿ ಅವರ ಹೆಸರು ‘ಹರೇಕಳ ಹಾಜಬ್ಬ’ ಎಂದು ಇದೆ. ಹೆಸರು ತಾಳೆ ಆಗದ ಕಾರಣಕ್ಕೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಗೊತ್ತಾಗಿದೆ.
ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಹಾಜಬ್ಬರಿಗೆ ನೋಟಿಸ್ ನೀಡಲಾಗಿತ್ತು.
ನೋಟೀಸ್ ನೀಡಿದ ಬಳಿಕ ಆದ ಪ್ರಮಾದದ ಬಗ್ಗೆ ಎಚ್ಚೆತ್ತ ಅಧಿಕಾರಿಗಳು ಮನೆಗೆ ಬಂದು ದಾಖಲೆಗಳನ್ನು ಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ವಿಷಯ ಬಹಿರಂಗ ಆಗುತ್ತಿದ್ದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಹರೇಕಳ ಹಾಜಬ್ಬರ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
















































