ಸುಳ್ಯ ಕಳೆದ ದಿನ ನಡೆದ ಟ್ರಾಫಿಕ್ ಜಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವ್ಯವಸ್ಥೆಯಲ್ಲಿನ ಲೋಪವನ್ನು ಮಾತ್ರ ಎತ್ತಿ ತೋರಿಸಿದ್ದೇನೆ. ಇದರಿಂದ ಸಾರ್ವಜನಿಕರಿಗೆ ಆದ ತೊಂದರೆಗೆ ಕನಿಷ್ಠ ಸಾರ್ವಜನಿಕ ವಿಷಾದವನ್ನಾದರೂ ವ್ಯಕ್ತಪಡಿಸಬೇಕಿತ್ತು. ಆದರೆ ತಾವು ಮಾಡಿದ್ದೇ ಸರಿ ಎಂಬ ಧೋರಣೆ ತಾಳಿರುವುದು “ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿ ನೋಡಿಕೊಂಡಂತೆ ಇದೆಯೆಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಬೆನ್ನು ಬೆನ್ನಿಗೆ ಬರುತ್ತಿರುವ ಅವರ ಸಮರ್ಥನೆಯ ಹೇಳಿಕೆಗಳನ್ನು ಗಮನಿಸಿದರೆ, ಮೊನ್ನೆಯ ಟ್ರಾಫಿಕ್ ಜಾಮ್ ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿಯೇ ಮಾಡಲಾಗಿತ್ತೇ ಎಂಬ ಅನುಮಾನ ಮೂಡುತ್ತಿದೆ.
ಅವರ ಈ ಉದ್ದಟತನವನ್ನು ಸೌಹಾರ್ದತೆಯ ಹೆಸರಿನಲ್ಲಿ ಸಹಿಸಿಕೊಳ್ಳಬೇಕೆಂಬ ಧೋರಣೆ ಅತ್ಯಂತ ಅಪಾಯಕಾರಿ.
ವಾಸ್ತವ ಸ್ಥಿತಿಯನ್ನು ಸ್ವತಃ ಪತ್ರಿಕೆಗಳೇ ವರದಿ ಮಾಡಿವೆ. ಪೊಲೀಸ್ ಅಧಿಕಾರಿಗಳೇ ವ್ಯವಸ್ಥೆಯಲ್ಲಿ ಲೋಪವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದೆ, ವಿಷಯವನ್ನು ಕೋಮು ವಿಷಯಕ್ಕೆ ವಿಷಯಾಂತರ ಮಾಡುತ್ತಿರುವುದು ಅವರ ಮಾನಸಿಕತೆಯನ್ನು ಸಮಾಜಕ್ಕೆ ಸ್ಪಷ್ಟಪಡಿಸಿದೆ.
ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳದಿದ್ದರೆ, ಸಮಾಜವೇ ಅದಕ್ಕೆ ತಕ್ಕ ಉತ್ತರ ನೀಡುತ್ತದೆಯೆಂದು ವಿನಯ್ ಕಂದಡ್ಕ ತಿಳಿಸಿದ್ದಾರೆ

















































