ವ್ಯಕ್ತಿ ಮತ್ತು ಅಲ್ಲಾಹ್‌ನ ನಡುವೆ ಮುಲ್ಲಾಗೇನು ಕೆಲಸ? ಮೊಹಮ್ಮದ್ ಶಮಿ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಮುಸ್ಲಿಂ ನಾಯಕ!

Picture of Savistara

Savistara

Bureau Report

ರೋಜಾ ಮಾಡದ ಕಾರಣಕ್ಕೆ ಮೊಹಮ್ಮದ್‌ ಶಮಿ ಅವರನ್ನು ಅಪರಾಧಿ ಎಂದು ಕರೆದಿರುವ ಮೌಲಾನಾ ಬರೇಲ್ವಿ ವಿರುದ್ಧ ಬಿಜೆಪಿ ನಾಯಕ ಮೋಶಿನ್‌ ರಜಾ ತೀವ್ರ ವಾಗ್ದಾಳಿ ನಡೆಸಿದ್ದು, ವ್ಯಕ್ತಿ ಮತ್ತು ಅಲ್ಲಾಹ್‌ ನಡುವೆ ಮುಲ್ಲಾ ಬರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇಸ್ಲಾಂ ರಾಷ್ಟ್ರೀಯ ಕರ್ತವ್ಯವನ್ನು ತಪ್ಪು ಎಂದು ಕರೆಯುವ ಧರ್ಮ ಅಲ್ಲ ಎಂದಿರುವ ಮೋಶಿನ್‌ ರಜಾ, ಬಿಟ್ಟಿ ಪ್ರಚಾರಕ್ಕಾಗಿ ಧರ್ಮವನ್ನು ಎಳೆದು ತಂದಿರುವ ಮೌಲಾನಾ ಬರೇಲ್ವಿ ಅವರ ನಡೆ ಖಂಡನೀಯ ಎಂದು ಜರೆದಿದ್ದಾರೆ.

ಲಖನೌ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಭಾರತ-ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್‌ ಪಂದ್ಯದ ವೇಳೆ ರೋಜಾ ಮಾಡದೇ ಜ್ಯೂಸ್‌ ಸೇವಿಸಿದ ಭಾರತ ಕ್ರಿಕೆಟ್‌ ತಂಡದ ಆಟಗಾರ ಮೊಹಮ್ಮದ್‌ ಶಮಿ ವಿರುದ್ಧ, ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ನೀಡಿರುವ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಮೊಹಮ್ಮದ್‌ ಶಮಿ ಅವರನ್ನು ಬೆಂಬಲಿಸಿ ಅನೇಕರು ಹೇಳಿಕೆ ನೀಡುತ್ತಿದ್ದು, ಉತ್ತರ ಪ್ರದೇಶದ ಬಿಜೆಪಿ ನಾಯಕ ಮೋಶಿನ್‌ ರಜಾ ಕೂಡ ಮೊಹಮ್ಮದ್‌ ಶಮಿ ಅವರನ್ನು ಅತ್ಯಂತ ಗಟ್ಟಿಯಾಗಿ ಬೆಂಬಲಿಸಿದ್ದಾರೆ.

ಈ ಕುರಿತು ಮತನಾಡಿರುವ ಮೋಶಿನ್‌ ರಜಾ, “ದೇಶಕ್ಕಾಗಿ ಆಡುತ್ತಿರುವ ಮೊಹಮ್ಮದ್‌ ಶಮಿ ವಿರುದ್ಧ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿಕೆ ಅತ್ಯಂತ ಖಂಡನಾರ್ಹ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಮುಂದುವರೆದು, “ಇದು ವ್ಯಕ್ತಿ ಮತ್ತು ಅಲ್ಲಾಹ್‌ ನಡುವಿನ ವಿಚಾರವಾಗಿದ್ದು, ಈ ಬಗ್ಗೆ ಮುಲ್ಲಾ (ಮೌಲಾನಾ ಬರೇಲ್ವಿ) ಮಾತನಾಡುವ ಅವಶ್ಯಕತೆ ಇಲ್ಲ. ಮೊಹಮ್ಮದ್‌ ಶಮಿ ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ಪೂರೈಸಿದ್ದಾರೆ. ದೇಶಸೇವೆ ಮಾಡುವುದನ್ನು ಇಸ್ಲಾಂ ಆಗಲಿ, ಅಲ್ಲಾಹ್‌ ಆಗಲಿ ವಿರೋಧಿಸಲು ಸಾಧ್ಯವೇ..? ಎಂದು ಮೋಶಿನ್‌ ರಜಾ ಪ್ರಶ್ನಿಸಿದ್ದಾರೆ. ಮೌಲಾನಾ ಖಾಲಿದ್ ರಶೀದ್ಇನ್ನು ಕ್ರಿಕೆಟಿಗ ಮೊಹಮ್ಮದ್‌ ಶಮಿ ಅವರನ್ನು “ಅಪರಾಧಿ” ಎಂದು ಕರೆದಿರುವ ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಹೇಳಿಕೆಯನ್ನು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯನಿರ್ವಾಹಕ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮೌಲಾನಾ ಖಾಲೀದ್‌ ರಶೀದ್‌, “ಎಲ್ಲಾ ಮುಸ್ಲಿಮರು ವಿಶೇಷವಾಗಿ ರಂಜಾನ್ ತಿಂಗಳಲ್ಲಿ ರೋಜಾವನ್ನು ಆಚರಿಸುವುದು ಕಡ್ಡಾಯವಾಗಿದೆ. ಆದರೆ ಒಬ್ಬ ವ್ಯಕ್ತಿಯು ಪ್ರಯಾಣದಲ್ಲಿದ್ದರೆ ಅಥವಾ ಆತ ಅನಾರೋಗ್ಯದಿಂದ ಬಳಲುತ್ತಿದ್ದರೆ ರೋಜಾ ಮಾಡದಿರುವ ಅವಕಾಶವನ್ನು ಇಸ್ಲಾಂ ನೀಡುತ್ತದೆ..” ಎಂದು ಸ್ಪಷ್ಟಪಡಿಸಿದ್ದಾರೆ.ಮುಂದುವರೆದು, “ಮೊಹಮ್ಮದ್‌ ಶಮಿ ಕೂಡ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ವಿದೇಶ ಪ್ರಯಾಣದಲ್ಲಿದ್ದಾರೆ. ಹೀಗಾಗಿ ಅವರು ರೋಜಾ ಮಾಡದಿರುವುದು ಖಂಡಿತ ಅಪರಾಧವಲ್ಲ. ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ರಾಷ್ಟ್ರೀಯ ಕರ್ತವ್ಯವನ್ನು ಪ್ರಶ್ನಿಸುವುದು ಸರಿಯಲ್ಲ..” ಎಂದು ಮೌಲಾನಾ ಬರೇಲ್ವಿ ಅವರನ್ನು ಮೌಲಾನಾ ಖಾಲೀದ್‌ ರಶೀದ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಏನಿದು ವಿವಾದ?

ಸದ್ಯ ರಂಜಾನ್‌ ತಿಂಗಳು ಆರಂಭವಾಗಿದ್ದು, ಜಗತ್ತಿನಾದ್ಯಂತ ಮುಸ್ಲಿಂ ಬಾಂಧವರು ‘ರೋಜಾ’ ಹೆಸರಿನ ಉಪವಾಸ ವೃತವನ್ನು ಆಚರಿಸುತ್ತಿದ್ದಾರೆ. ಆದರೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರ ಭಾರತ-ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್‌ ಪಂದ್ಯದ ಭಾಗವಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಶಮಿ, ಪಂದ್ಯದ ವೇಳೆ ಜ್ಯೂಸ್‌ ಕುಡಿದಿದ್ದರು.ಶಮಿ ಅವರ ಈ ನಡೆಯನ್ನು ಖಂಡಿಸಿದ್ದ ಅಖಿಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, “ಮೊಹಮ್ಮದ್‌ ಶಮಿ ಓರ್ವ ಅಪರಾಧಿಯಾಗಿದ್ದು, ದೇವರಿಗೆ ಉತ್ತರ ನೀಡಲೇಬೇಕಾಗುತ್ತದೆ..” ಎಂದು ಗುಡುಗಿದ್ದರು.ಮೊಹಮ್ಮದ್‌ ಶಮಿ ವಿರುದ್ಧದ ಮೌಲಾನಾ ಬರೇಲ್ವಿ ಅವರ ಹೇಳಿಕೆಗೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕ್ರೀಡೆಯಲ್ಲಿ ಧರ್ಮ ಮತ್ತ ಧಾರ್ಮಿಕ ಆಚರಣೆ ತೂರಿಸುವುದು ಒಳ್ಳೆಯದಲ್ಲ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಅಲ್ಲದೇ ಮೊಹಮ್ಮದ್‌ ಶಮಿ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಯಾವ ಧರ್ಮವೂ ರಾಷ್ಟ್ರೀಯ ಕರ್ತವ್ಯವನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

[t4b-ticker]
error: Content is protected !!