ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದನ್ನು ವಿಜಯಪುರ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಅಂಗೀಕರಿಸಲಾಯಿತು.
ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಹೊರಡಿಸಿರುವ ಆದೇಶವನ್ನು ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ.ವಿಜಯಪುರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯತ್ನಾಳ್ ಉಚ್ಚಾಟನೆ ಕುರಿತಂತೆ ಚರ್ಚೆ ನಡೆಯಿತು. ಈ ವೇಳೆ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಠರಾವು ಪಾಸ್ ಮಾಡಿದರು. ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೋರ್ ಕಮಿಟಿ ಸದಸ್ಯ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಠರಾವು ಓದಿದರು.”ಭಾರತೀಯ ಜನತಾ ಪಾರ್ಟಿಯ ಕೇಂದ್ರ ಶಿಸ್ತು ಸಮಿತಿಯು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಂದಿನ 6 ವರ್ಷಗಳವರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ. ಹಾಗೂ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ದೇಶಿಸಿ ಶಿಸ್ತು ಸಮಿತಿ ಹೊರಡಿಸಿದ ಆದೇಶವನ್ನು ಬಿಜೆಪಿ ವಿಜಯಪುರ ಜಿಲ್ಲಾ ಕೋರ್ ಕಮಿಟಿಯಲ್ಲಿ ಸರ್ವಾನುಮತದಿಂದ ಬೆಂಬಲಿಸಿ ಅಂಗೀಕರಿಸಲಾಯಿತು” ಎಂದು ತಿಳಿಸಿದರು.
ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ”ಮುಂದೆ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠಗೊಳಿಸಲು ಹೋರಾಡುತ್ತೇನೆ. ಪಕ್ಷದ ಸಿದ್ದಾಂತಕ್ಕಾಗಿ ಗಟ್ಟಿಯಾಗಿ ಯಾರಿಗೂ ಅಂಜದೇ ಕೆಲಸ ಮಾಡುವೆ” ಎಂದು ಹೇಳಿದರು.
ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಗುರುಲಿಂಗಪ್ಪ ಅಂಗಡಿ, ”ನಿನ್ನೆ ಎರಡು ರಾಜೀನಾಮೆ ಬಂದಿವೆ, ಇಂದೂ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸಹಿ ಮಾಡಿಸಿಕೊಂಡು ರಾಜೀನಾಮೆ ತಂದು ಸಲ್ಲಿಸಿದ್ದಾರೆ. ಸಹಿ ಮಾಡಿದವರು ಹಾಗೂ ರಾಜೀನಾಮೆ ಕೊಟ್ಟವರ ಜೊತೆಗೆ ಮಾತನಾಡಿ, ನಿರ್ಧಾರ ತೆಗೆದುಕೊಳ್ಳುವೆ. ಸದ್ಯಕ್ಕೆ ಯಾರ ರಾಜೀನಾಮೆಯನ್ನೂ ಒಪ್ಪಿಕೊಳ್ಳಲ್ಲ” ಎಂದು ಸ್ಪಷ್ಟಪಡಿಸಿದರು.













































