ಮೋದಿಯೇ ಗೌರವಯುತವಾಗಿ ಕರೆಸಿಕೊಳ್ಳುವ ಹಾಗೇ ಮಾಡುತ್ತೇನೆ : ಬಿಎಸ್​ವೈ ವಿರುದ್ದ ಯತ್ನಾಳ್ ಶಪಥ

Picture of Savistara

Savistara

Bureau Report

ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರೇ ನನ್ನನ್ನು ವಾಪಸ್‌ ಕರೆದುಕೊಳ್ತಾರೆ ಎನ್ನುವ ಮೂಲಕ ಕಮ್‌ ಬ್ಯಾಕ್‌ ಮಾಡ್ತೀನಿ ಎಂದು ಯತ್ನಾಳ್ ಹೇಳಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನಿರಂತರ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ.

ಬೆಂಗಳೂರು : ” ಇಷ್ಟು ದಿನ ನನಗೆ ಪಂಚಮಶನಿ ಇತ್ತು, ಈಗ ಅದು ಮುಗಿದಿದೆ. ಸನಾತನ ಧರ್ಮದ ಹೊಸ ವರ್ಷ ಯುಗಾದಿಯಿಂದ ಶುರುವಾದಂತೆ, ಯುಗಾದಿಯಿಂದ ನನ್ನ ಭವಿಷ್ಯವೂ ಹೊಸದಾಗಿ ಪ್ರಾರಂಭ ಆಗಲಿದೆ. ನನ್ನನ್ನು ಯಡಿಯೂರಪ್ಪ ಕುಟುಂಬ ಉಚ್ಚಾಟನೆ ಮಾಡಿದೆಯೇ ಹೊರತು ಜನರು ಉಚ್ಚಾಟನೆ ಮಾಡಿಲ್ಲ” ಎಂದು ಯತ್ನಾಳ್ ಹೇಳುವ ಮೂಲಕ, ಕರ್ನಾಟಕ ಬಿಜೆಪಿಯ ಜಗಳ ಅಂತ್ಯ ಕಾಣುವಂತೆ ಕಾಣಿಸುತ್ತಿಲ್ಲ.

ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದರೂ, ಬಿಜೆಪಿಯಲ್ಲಿ ಎಲ್ಲವೂ ಇನ್ನೂ ಸರಿಯಿಲ್ಲ. ಯತ್ನಾಳ್ ಬೆಂಬಲಿಸಿ, ಸಮಾನ ಮನಸ್ಕರ ಸಭೆ ನಿನ್ನೆ (ಮಾ. 28) ನಡೆದಿತ್ತು.

ಇಂದು (ಮಾ. 29) ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ಹೊಸ ಯುದ್ದವನ್ನು ಸಾರಿದ್ದಾರೆ. ಅಷ್ಟೇ ಅಲ್ಲದೇ, ಬಿಜೆಪಿಗೆ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತೇನೆ ಎಂದು ಶಪಥವನ್ನು ಮಾಡಿದ್ದಾರೆ. ಯತ್ನಾಳ್ ಮತ್ತೆ ಬಿಜೆಪಿಗೆ ಬರುತ್ತಾರೆ ಎಂದು ರಮೇಶ್ ಜಾರಕಿಹೊಳಿ ಕೂಡಾ ಹೇಳಿದ್ದರು.

ಈ ಯುಗಾದಿಯಿಂದಲೇ ಯಡಿಯೂರಪ್ಪ ಅವರ ಅಂತ್ಯ ಶುರುವಾಗುತ್ತದೆ ಎನ್ನುವ ಮೂಲಕ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ್‌ ಹೊಸ ಸಮರವನ್ನು ಸಾರಲು ಮುಂದಾಗಿದ್ದಾರೆ. ಅಂದರೆ, ಮುಂದಿನ ವಾರದಿಂದ, ಯತ್ನಾಳ್ ಎಂಡ್ ಟೀಂ ಅವರ ಆಟ ಜೋರಾಗುವ ಸಾಧ್ಯತೆಯಿದೆ.

ಬಸನಗೌಡ ಯತ್ನಾಳ್‌ ಉಚ್ಚಾಟನೆ ಬಿಜೆಪಿಯಯಲ್ಲಿನ ಗೊಂದಲಕ್ಕೆ ಒಂದಿಷ್ಟಾದರೂ ಬ್ರೇಕ್‌ ಹಾಕುತ್ತೆ ಎಂದು ಭಾವಿಸಲಾಗಿತ್ತು. ಆದರೆ, ಅವರ ಉಚ್ಚಾಟನೆ ಪಕ್ಷದಲ್ಲಿ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿದೆ. ಅದಕ್ಕೆ ಪೂರಕವಾದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ.

ಯುಗಾದಿಯಿಂದಲೇ ಯಡಿಯೂರಪ್ಪ ಅವರ ಮತ್ತು ಅವರ ಕುಟುಂಬದ ಅಂತ್ಯ ಶುರುವಾಗುತ್ತದೆ. ಇವರು ಹೋಗಿ ಹೈಕಮಾಂಡ್‌ ಮುಂದೆ ಏನೇನು ಹೇಳಿದ್ದಾರೋ ಗೊತ್ತಿಲ್ಲ, ನನ್ನನ್ನು ಉಚ್ಚಾಟನೆ ಮಾಡಿಸಿದ್ದಾರೆ. ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಕಾಪಾಡಲು ಹೋರಾಟ ಮುಂದುವರೆಸುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರೇ ನನ್ನನ್ನು ಗೌರವಯುತವಾಗಿ ವಾಪಸ್‌ ಪಕ್ಷಕ್ಕೆ ನೂರಕ್ಕೆ ನೂರರಷ್ಟು ಕರೆದುಕೊಳ್ಳುತ್ತಾರೆ. ವಾಪಸ್‌ ಬಂದು ಇವರಿಗೆ ಬುದ್ಧಿ ಕಲಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಯತ್ನಾಳ್‌ಗೆ ಹಿಂದುತ್ವದ ಹಾದಿ, ಕಳಂಕರಹಿತ ವ್ಯಕ್ತಿತ್ವ, ಕುಟುಂಬ ರಾಜಕಾರಣ ವಿರುದ್ಧ ಹೋರಾಟ, ಪಕ್ಷದ ಸಿದ್ಧಾಂತದ ಮೇಲಿನ ನಂಬಿಕೆ ಅವರನ್ನು ವಾಪಸ್ ಕರೆಸಿಕೊಳ್ಳಲು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

” ನಾನು ಸನಾತನ ಸಂರಕ್ಷಣೆಗೆ ಕೆಲಸ ಮಾಡಿದ್ದೀನಿ, ಗೋ ರಕ್ಷಣೆಗೆ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಏನು ಮಾಡಿದ್ದಾರೆ. ಅವರು ಅಧಿಕಾರದಲ್ಲಿದ್ದಾಗಲೇ ಹಿಂದೂಗಳ ರಕ್ಷಣೆಗೆ ಮುಂದಾಗಲಿಲ್ಲ, ಅಪ್ಪ-ಮಕ್ಕಳಂತೆ ನಾನು ಭ್ರಷ್ಟಾಚಾರನೂ ಮಾಡಿಲ್ಲ ” ಎನ್ನುವ ಮೂಲಕ ತಂದೆ-ಮಗನ ವಿರುದ್ದ ವಾಕ್ ಪ್ರಹಾರ ಮುಂದುವರಿಸಿದ್ದಾರೆ.ಬಿಜೆಪಿಯ ಬಹುತೇಕ ಶಾಸಕರು, ನಾಯಕರು ತಮಗೆ ಬೆಂಬಲ ಸೂಚಿಸಿದ್ದಾರೆ. ನಿಮ್ಮನ್ನು ಉಚ್ಚಾಟಿಸಬಾರದಿತ್ತು, ಅನ್ಯಾಯ ಮಾಡಿದರು ಎಂದು ಹೇಳಿದ್ದಾರೆ ಎಂದು ಯತ್ನಾಳ್‌ ಹೇಳಿದ್ದಾರೆ. ಬಿಜೆಪಿಯ ಹಲವು ನಾಯಕರು, ಯತ್ನಾಳ್ ಉಚ್ಚಾಟನೆ ದುರದೃಷ್ಟಕರ ಎಂದಿದ್ದಾರೆ.

[t4b-ticker]
error: Content is protected !!