ಸುಳ್ಯ: ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್, ಗ್ರಾಮ ಪಂಚಾಯತ್ ಬೆಳ್ಳಾರೆ. ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ಅಕ್ಷಯ ಯುವಕ ಮಂಡಲ ನೆಟ್ಟಾರು ಸಂಯುಕ್ತ ಆಶ್ರಯದಲ್ಲಿ 1837ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ನೆನಪಿಗಾಗಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮವು ಭಾನುವಾರ ಬೆಳ್ಳಾರೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ, ಬೆಳ್ಳಾರೆಯ ಬಂಗ್ಲೆಗುಡ್ಡೆ ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ಅಂದಿನ ಹೋರಾಟದ ಬಗ್ಗೆ ಜನರಿಗೆ ತಿಳಿಸುವಂತೆ ಆಗಬೇಕು.ಹೋರಾಟದಲ್ಲಿ ಮಡಿದವರನ್ನು ನೆನಪಿಸುವ ಕೆಲಸ ಆಗಬೇಕು. ಬಂಗಗುಡ್ಡೆ ಅಭಿವೃದ್ಧಿಗಾಗಿ ಸರಕಾರದ ಅನುದಾನಕ್ಕೆ ಶ್ರಮ ವಹಿಸುವುದಾಗಿ ಅವರು ತಿಳಿಸಿದರು.ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ ನ ಅಧ್ಯಕ್ಷ ಅನಿಂದಿತ್ ಕೊಚ್ಚಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳರವರು ಮಾತನಾಡಿ
ಅಂದು ಭೌಗೋಳಿಕವಾದಂತಹ ಹೋರಾಟ ಆಗಿದೆ.ಯಾವುದೇ ಜಾತಿ, ಮತ, ಭೇದವಿಲ್ಲದೆ ಸಮಗ್ರ ಹೋರಾಟ ವಾಗಿತ್ತು. ಬೆಳ್ಳಾರೆ ಐತಿಹಾಸಿಕ ಸ್ಥಳದ ಮಹತ್ವದ ಬಗ್ಗೆ ಮತ್ತು ಅಂದು ಬ್ರಿಟಿಷರ ವಿರುದ್ಧ ಹೋರಾಟದ ಬಗ್ಗೆ ಅವರು ಮಾಹಿತಿ ನೀಡಿದರು.
ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊಣ್ಣಣ್ಣರವರು ಮಾತನಾಡಿದರು.ಇದಕ್ಕೂ ಮೊದಲು ಗ್ರಾ.ಪಂ. ಅಧ್ಯಕ್ಷೆ ನಮಿತ ಎಲ್.ರೈ ಬಂಗ್ಲೆಗುಡ್ಡೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್. ಕೆ. ಭಟ್ ಕುರುಂಬುಡೇಲು, ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ನೆಟ್ಟಾರು, ಬೆಳ್ಳಾರೆ ಕೆಪಿಎಸ್ ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ವಸಂತ ಉಲ್ಲಾಸ್ ಉಪಸ್ಥಿತರಿದ್ದರು. ಇಂಚಿನ ಪಿ.ಡಿ. ಪ್ರಾರ್ಥಿಸಿ, ಗ್ರಾ.ಪಂ. ಸದಸ್ಯ ಚಂದ್ರಶೇಖರ ಪನ್ನೆ ಸ್ವಾಗತಿಸಿ, ದಿಲೀಪ್ ಗಟ್ಟಿಗಾರು ನಿರೂಪಿಸಿ, ಶೈಲೇಶ್ ನೆಟ್ಟಾರು ವಂದಿಸಿದರು.













































