ವಕ್ಫ್​ ತಿದ್ದುಪಡಿ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಸಿಎಂ ಸ್ಟಾಲಿನ್

Picture of Savistara

Savistara

Bureau Report

ಅಲ್ಪಸಂಖ್ಯಾತ ಮುಸ್ಲಿಮರನ್ನು ಬೆದರಿಸುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧ ತಮಿಳುನಾಡು ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಸಿಎಂ ಎಂ.ಕೆ.ಸ್ಟಾಲಿನ್​ ಹೇಳಿದ್ದಾರೆ.

ಚೆನ್ನೈ(ತಮಿಳುನಾಡು): ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಕ್ಫ್​ ತಿದ್ದುಪಡಿ​ ಮಸೂದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ​ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ತಿಳಿಸಿದರು.ವಕ್ಫ್ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು ಇಂದು ಕಪ್ಪು ಪಟ್ಟಿ ಧರಿಸಿ ತಮಿಳುನಾಡು ವಿಧಾನಸಭೆಗೆ ಹಾಜರಾದರು. ದೇಶದ ಬಹುಸಂಖ್ಯಾತ ಪಕ್ಷಗಳ ವಿರೋಧದ ನಡುವೆ ಕೆಲವು ಮಿತ್ರ ಪಕ್ಷಗಳ ಬೆಂಬಲದಿಂದ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದು ಸಂವಿಧಾನ ರಚನೆಯ ಮೇಲಿನ ದಾಳಿ ಎಂದು ಅವರು ಟೀಕಿಸಿದ್ದಾರೆ.ಇದು ಧಾರ್ಮಿಕ ಸಾಮರಸ್ಯವನ್ನು ಕದಡುವ ಕೆಲಸ. ಈ ಕುರಿತು ಗಮನ ಸೆಳೆಯುವ ಉದ್ದೇಶದಿಂದ ವಿಧಾನಸಭೆ ಕಲಾಪದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸುತ್ತಿದ್ದೇವೆ ಎಂದು ಅವರು ಸದನಕ್ಕೆ ತಿಳಿಸಿದರು.ಈ ವಿವಾದಾತ್ಮಕ ತಿದ್ದುಪಡಿಯನ್ನು ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ. ವಕ್ಫ್​ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮತ್ತು ಅಲ್ಪಸಂಖ್ಯಾತ ಮುಸ್ಲಿಮರನ್ನು ಬೆದರಿಸುವ ಕೇಂದ್ರದ ಕಾನೂನಿನ ವಿರುದ್ಧ ತಮಿಳುನಾಡು ಹೋರಾಡಲಿದೆ ಎಂದು ಅವರು ಹೇಳಿದರು. ಸಿಎಂ ಹೇಳಿಕೆಯನ್ನು ಡಿಎಂಕೆ ಸದಸ್ಯರು ಬೆಂಚು ಕುಟ್ಟಿ ಬೆಂಬಲಿಸಿದರು.

ವಕ್ಫ್​ ತಿದ್ದುಪಡಿ ಮಸೂದೆ ಭಾರತದ ಧಾರ್ಮಿಕ ಸಾಮರಸ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಮಾರ್ಚ್ 27ರಂದು ತಮಿಳುನಾಡು ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು.

ಲೋಕಸಭೆಯಲ್ಲಿ 232 ಸಂಸದರು ವಿರುದ್ಧ ಮತ ಚಲಾಯಿಸಿದರೂ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿರುವುದು ಅತ್ಯಂತ ಖಂಡನೀಯ ಎಂದು ಸ್ಟಾಲಿನ್ ಹೇಳಿದರು.ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸಿಎಂ ಸ್ಟಾಲಿನ್​, ಪ್ರಸ್ತಾವಿತ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

[t4b-ticker]
error: Content is protected !!