ಮಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯವು ಘಟಕ ಕಾಲೇಜುಗಳನ್ನು ಸರ್ಕಾರ ವಹಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದ ಬೆನ್ನಲ್ಲೇ, ಘಟಕ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ಕೋರ್ಸ್ಗಳ ವಿಭಾಗಗಳನ್ನು ವಿವಿ ಕ್ಯಾಂಪಸ್ಗೆ ಸ್ಥಳಾಂತರಿಸಲು ಮುಂದಾಗಿದೆ.
ಹಂಪನಕಟ್ಟೆಯ ವಿವಿ ಕಾಲೇಜು, ಸಂಧ್ಯಾ ಕಾಲೇಜು, ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜು, ನೆಲ್ಯಾಡಿ ವಿಶ್ವವಿದ್ಯಾಲಯ ಕಾಲೇಜು ಹಾಗೂ ವಿವಿ ಆವರಣದಲ್ಲಿರುವ ಪದವಿ ಕಾಲೇಜು ಸೇರಿದಂತೆ ಒಟ್ಟು ಐದು ಘಟಕ ಕಾಲೇಜುಗಳು ಇವೆ. ಇವುಗಳಲ್ಲಿ ಹಂಪನಕಟ್ಟೆಯ ವಿವಿ ಕಾಲೇಜು ಹೊರತುಪಡಿಸಿ, ಉಳಿದ ಕಾಲೇಜುಗಳ ನಿರ್ವಹಣೆ ಮಂಗಳೂರು ವಿವಿಗೆ ಹೊರೆಯಾಗಿ ಪರಿಣಮಿಸಿದೆ. ಕಾಲೇಜುಗಳು ನಿರ್ವಹಣೆ, ಅತಿಥಿ ಉಪನ್ಯಾಸಕರ ಗೌರವಧನ ಪಾವತಿಗೆ ಹಣಕಾಸಿನ ಕೊರತೆ ಎದುರಾಗಿದೆ ಎನ್ನುತ್ತವೆ ವಿವಿ ಮೂಲಗಳು.ವಿವಿಗೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಅನುದಾನ ದೊರೆಯುತ್ತಿಲ್ಲ. ಸ್ಥಳೀಯವಾಗಿ ಸಂಗ್ರಹವಾಗುವ ಆದಾಯದಿಂದ ಅತಿಥಿ ಉಪನ್ಯಾಸಕರು, ತಾತ್ಕಾಲಿಕವಾಗಿ ನೇಮಕಗೊಂಡಿರುವ ಸಿಬ್ಬಂದಿ ಗೌರವಧನ, ಇನ್ನುಳಿದ ಕಾಮಗಾರಿ ಬಿಲ್ ಪಾವತಿ, ದೈನಂದಿನ ಖರ್ಚು-ವೆಚ್ಚಗಳನ್ನು ನಿಭಾಯಿಸಲಾಗದೆ, ವಿವಿ ನಷ್ಟದಲ್ಲಿ ಮುನ್ನಡೆಯುತ್ತಿದೆ. ಈ ಕಾರಣಕ್ಕೆ ನಾಲ್ಕು ಘಟಕ ಕಾಲೇಜುಗಳನ್ನು ಸರ್ಕಾರವೇ ಮುನ್ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಕೆಲ ತಿಂಗಳುಗಳ ಹಿಂದೆ ವಿವಿ ಪತ್ರ ಬರೆದಿದೆ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದರು.
ವೆಚ್ಚ ಕಡಿತಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡು, ಆರ್ಥಿಕ ಶಿಸ್ತು ತರಲು ಪ್ರಯತ್ನಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ, ಹಂಪನಕಟ್ಟೆ ವಿವಿ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿರುವ ಸ್ನಾತಕೋತ್ತರ ಕೋರ್ಸ್ಗಳ ವಿಭಾಗಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ಸ್ಥಳಾಂತರಿಸಿ, ವಿವಿಯಲ್ಲಿರುವ ವಿಭಾಗಗಳಲ್ಲಿ ವಿಲೀನಗೊಳಿಸಲು ಚರ್ಚೆಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಯಾವ ಕೋರ್ಸ್ಗಳು?:ಹಂಪನಕಟ್ಟೆ ಕಾಲೇಜಿನಲ್ಲಿ ಎಂ.ಕಾಂ, ಅರ್ಥಶಾಸ್ತ್ರ, ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ, ಹಿಂದಿ ಮತ್ತು ರಸಾಯನ ವಿಜ್ಞಾನ ಸ್ನಾತಕೋತ್ತರ ಕೋರ್ಸ್ಗಳು ಇವೆ. ಎಂ.ಕಾಂ.ನಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷ ಸೇರಿ 166 ವಿದ್ಯಾರ್ಥಿಗಳು ಇದ್ದು, ಇದು ಗರಿಷ್ಠ ಸಂಖ್ಯೆಯಾಗಿದೆ. ಐದು ಕೋರ್ಸ್ಗಳಿಂದ 260ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅರ್ಥಶಾಸ್ತ್ರ, ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗಗಳಲ್ಲಿ ಪ್ರಸ್ತುತ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾತ್ರ ಇದ್ದಾರೆ.
ಸಂಧ್ಯಾ ಕಾಲೇಜಿನಲ್ಲಿ ಎಂ.ಕಾಂ, ಎಂಬಿಎ, ಕೊಂಕಣಿ ಮತ್ತು ತುಳು ಎಂ.ಎ ಕೋರ್ಸ್ಗಳು ಇವೆ. ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷ ಸೇರಿ ಎಂ.ಕಾಂ.ಗೆ 47 ವಿದ್ಯಾರ್ಥಿಗಳಿದ್ದರೆ, ಎಂಬಿಎ 91, ತುಳು 19 ವಿದ್ಯಾರ್ಥಿಗಳಿದ್ದಾರೆ. ಕೊಂಕಣಿ ಎಂ.ಎ. ಕೋರ್ಸ್ ವಿದ್ಯಾರ್ಥಿಗಳ ಕೊರತೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ದ್ವಿತೀಯ ವರ್ಷದಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದಾರೆ. ಎರಡೂ ಕಾಲೇಜುಗಳಿಂದ 25ಕ್ಕೂ ಹೆಚ್ಚು ಗೌರವ ಉಪನ್ಯಾಸಕರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.ಎಂ.ಎ. ಪಾಠ ಮಾಡಲು ಅರ್ಹತೆ ಹೊಂದಿರುವ ಉಪನ್ಯಾಸಕರು ಈ ಕಾಲೇಜುಗಳಲ್ಲಿ ಇಲ್ಲ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಕೋರ್ಸ್ಗಳನ್ನು ಘಟಕ ಕಾಲೇಜಿನಿಂದ ವಿವಿ ಕ್ಯಾಂಪಸ್ಗೆ ಸ್ಥಳಾಂತರಿಸಲಾಗುತ್ತದೆ. ಸ್ನಾತಕೋತ್ತರ ಪದವಿಗೆ ನೋಂದಣಿ ಮಾಡಿಕೊಂಡವರಿಗೆ ವಿವಿಯಲ್ಲಿ ತಜ್ಞ ಉಪನ್ಯಾಸಕರ ಪಾಠ ದೊರೆತಂತಾಗುತ್ತದೆ ಎಂಬುದು ವಿವಿ ಅಧಿಕಾರಿಗಳು ನೀಡುವ ವಿವರಣೆ.













































