ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ ನಾಲ್ಕು ರೂಪಾಯಿ ಹೆಚ್ಚಳವಾಗಿರುವುದರಿಂದ ಬೆಂಗಳೂರಿನ ಬಹುತೇಕ ಹೋಟೆಲ್ಗಳು, ಕೆಫೆಗಳು ಮತ್ತು ಟೀ ಸ್ಟಾಲ್ಗಳು ಕಾಫಿ, ಚಹಾ ದರ ಏರಿಸಿವೆ.
ಬೆಂಗಳೂರು: ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂಪಾಯಿ ಹೆಚ್ಚಿಸಿತ್ತು. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಇದರ ಪರಿಣಾಮ, ಅನೇಕ ಹೋಟೆಲ್ಗಳು ಕಾಫಿ ಮತ್ತು ಚಹಾ ದರ ಏರಿಸಿವೆ. ಬೆಲೆ ಏರಿಕೆ ಬಿಸಿ ಇದೀಗ ಗ್ರಾಹಕರಿಗೆ ತಟ್ಟಿದೆ.ಬೆಂಗಳೂರಿನ ಬಹುತೇಕ ಹೋಟೆಲ್ಗಳು, ಕೆಫೆಗಳು ಮತ್ತು ಟೀ ಸ್ಟಾಲ್ಗಳಲ್ಲಿ ಒಂದು ಕಪ್ ಚಹಾ ಮತ್ತು ಕಾಫಿಯ ಬೆಲೆಯನ್ನು 3 ರೂ.ನಿಂದ 10 ರೂ.ವರೆಗೆ ಏರಿಸಿವೆ. ವಿದ್ಯುತ್ ದರ, ಇಂಧನ ದರ ಮತ್ತು ತ್ಯಾಜ್ಯ ಸಂಗ್ರಹ ಶುಲ್ಕ ಹೆಚ್ಚಳ ಅಗತ್ಯ ಸರಕು ಮತ್ತು ಸೇವೆಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚು ಬಳಸುವ ಹೋಟೆಲ್ ಉದ್ಯಮಕ್ಕೆ ಇದು ಹೊರೆಯಾಗಿದೆ.ಅನೇಕ ಹೋಟೆಲ್ಗಳು ಮತ್ತು ಟೀ ಸ್ಟಾಲ್ಗಳು ಈಗಾಗಲೇ ತಮ್ಮ ಮೆನುವಿನಲ್ಲಿ ಬೆಲೆಗಳನ್ನು ಪರಿಷ್ಕರಿಸಿವೆ.”ಹಾಲು ಮತ್ತು ಇತರ ವಸ್ತುಗಳ ಬೆಲೆ ಏರಿಕೆಯಿಂದಾಗಿ, ನಾವೂ ದರ ಹೆಚ್ಚಿಸಿದ್ದೇವೆ. ಗ್ರಾಹಕರು ಸಹಕಾರಿಸುವಂತೆ ವಿನಂತಿ” ಎಂದು ಬೆಂಗಳೂರಿನ ಟೀ ಸ್ಟಾಲ್ವೊಂದರ ಹೊರಗೆ ಫಲಕ ಹಾಕಲಾಗಿದೆ.
ಕಾಫಿ ಪ್ರಿಯರಿಗೆ ಡಬಲ್ ಶಾಕ್: ಹಾಲಿನ ದರ ಏರಿಕೆಯ ಜೊತೆಗೆ ಕಾಫಿ ಪುಡಿಯ ಬೆಲೆಯೂ ಹೆಚ್ಚಾಗಿದೆ. ಕಾಫಿ ಉದ್ಯಮದ ಮೂಲಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಬೆಲೆ ಪ್ರತಿ ಕೆ.ಜಿ.ಗೆ 100 ರೂ.ಗಳಷ್ಟು ಹೆಚ್ಚಾಗಿದೆ ಮತ್ತು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದು ಸಣ್ಣ ಟೀ ಅಂಗಡಿ ನಡೆಸುವವರು ಮತ್ತು ಹೋಟೆಲ್ ನಡೆಸುವವರಿಗೆ ಮತ್ತಷ್ಟು ಹೊರೆಯಾಗಿದೆ. ಇದರಿಂದ ವ್ಯಾಪಾರಿಗಳು ಕಾಫಿ, ಟೀ ದರ ಹೆಚ್ಚಿಸಿ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ.
ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ ‘ಈಟಿವಿ ಭಾರತ’ ಜೊತೆಗೆ ಮಾತನಾಡಿ, “ಚಹಾ, ಕಾಫಿ ಮತ್ತು ಹಾಲಿನಿಂದ ತಯಾರಿಸುವ ಇತರ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ನಾವು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಂಡು ತಿಳಿಸುತ್ತೇವೆ” ಎಂದರು.ಹಾಲು ಆಧಾರಿತ ಉತ್ಪನ್ನಗಳೂ ಏರಿಕೆ ಸಾಧ್ಯತೆ: ಬೆಲೆ ಏರಿಕೆ ಕಾಫಿ, ಟೀಗೆ ಮಾತ್ರ ಸೀಮಿತವಾಗಿಲ್ಲ. ಮುಂಬರುವ ದಿನಗಳಲ್ಲಿ ಹಾಲಿನಿಂದ ತಯಾರಾಗುವ ಪನೀರ್, ಪೇಡಾ ಮತ್ತು ಸಿಹಿ ತಿನಿಸುಗಳ ಬೆಲೆಯೂ ದುಬಾರಿಯಾಗಲಿದೆ ಎಂದು ಹೋಟೆಲ್ ಮಾಲೀಕರು ಮತ್ತು ಸ್ವಿಟ್ ಶಾಪ್ ಮಾಲೀಕರು ಹೇಳುತ್ತಿದ್ದಾರೆ.”ತಯಾರಿಕಾ ವೆಚ್ಚಗಳು ಹೆಚ್ಚಾಗಿವೆ. ಅದಕ್ಕೆ ತಕ್ಕಂತೆ ಬೆಲೆಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ” ಎಂದು ಬೆಂಗಳೂರಿನ ಹೋಟೆಲ್ ಉದ್ಯಮಿಯೊಬ್ಬರು ತಿಳಿಸಿದ್ದಾರೆ.
ಗ್ರಾಹಕರಾದ ಲಕ್ಷ್ಮಿ ಮಾತನಾಡಿ, “ಹಾಲಿ ದರ ಏರಿಕೆ ಪ್ರತಿ ದಿನ ಒಂದು ಕಪ್ ಚಹಾ ಕುಡಿಯುವ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಬೆಲೆ ಏರಿಕೆ ಸಣ್ಣ ಮೊತ್ತವೆಂದು ತೋರಬಹುದು, ಆದರೆ ದುಡಿದು ತಿನ್ನುವವರಿಗೆ ಇದು ಹೊರೆಯಾಗಿದೆ” ಎಂದರು.













































