ಕೇರಳದ ವಿಳಿಂಜಂ ಅಂತಾರಾಷ್ಟ್ರೀಯ ಬಂದರಿನ ಉದ್ಘಾಟನೆಯನ್ನು ನೆರವೇರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇವಲ ಅಭಿವೃದ್ಧಿಯ ಕುರಿತು ಮಾತ್ರ ಮಾತನಾಡದೆ, ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸುವ ಮಾತನ್ನೂ ಹೊರಹಾಕಿದ್ದಾರೆ. ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಪಕ್ಕದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಕುಳಿತಿರುವುದನ್ನು ನೋಡಿ ಕೆಲವರ ನಿದ್ದೆ ಹಾರಿಬಿಟ್ಟಿದೆ ಎಂದು ನಗೆಚಟಾಕಿಯಾಗಿ ವ್ಯಂಗ್ಯವಾಡಿದರು. “ತರೂರ್ ನನ್ನ ಪಕ್ಕದಲ್ಲೇ ಇದ್ದರು. ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೂ ಬಂದಿದ್ದರು ಎಂಬುದನ್ನು ತಿಳಿದರೆ ಕೆಲವರು ನಿದ್ದೆ ಮಾಡುವುದನ್ನೇ ಮರೆತುಹೋಗುತ್ತಾರೆ” ಎಂದರು.ಈ ಮಾತಿಗೆ ತರೂರ್ ಕೂಡ ಮುಗುಳ್ನಗೆಯಿಂದ ಪ್ರತಿಕ್ರಿಯಿಸಿದರು. ಪ್ರಧಾನಿ ಹೇಳಿಕೆಯು ಕೇವಲ ವೇದಿಕೆಯಲ್ಲಿ ಸೃಷ್ಟಿಯಾದ ತಮಾಷೆಯ ಮಾತು ಮಾತ್ರವಲ್ಲದೆ, ಕೇರಳದ ರಾಜಕೀಯ ಬದಲಾವಣೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಶಿ ತರೂರ್ ಅವರು, ತಮ್ಮ ಪಕ್ಷ ಕಾಂಗ್ರೆಸ್ನಿಂದ ಹಂತ ಹಂತವಾಗಿ ದೂರ ಸರಿಯುತ್ತಿರುವ ವದಂತಿಗಳು ಈಗಲೂ ಕೇಳಿಬರುತ್ತಿಬೆ. ಅವರು ಇತ್ತೀಚೆಗೆ ನೀಡಿದ ಕೆಲ ಹೇಳಿಕೆಗಳು, ಪಕ್ಷದ ವಿರುದ್ಧದ ಅಸಮಾಧಾನವನ್ನು ತೋರುತ್ತಿವೆ. ಜೊತೆಗೆ,ಪ್ರಧಾನಿ ಮೋದಿ ಅವರ ಕೆಲಸಗಳಿಗೆ ಆಗಾಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.
ಈ ಎಲ್ಲದರಿಂದ, ಶಶಿ ತರೂರ್ ಬಹುಶಃ ಭವಿಷ್ಯದಲ್ಲಿ ದೊಡ್ಡ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.













































