ಪ್ರಧಾನಿ ಮೋದಿ ನಾಯಕತ್ವದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನವದೆಹಲಿ: “ದೇಶದ ಜನ ಬಯಸಿದ್ದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಗುತ್ತದೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಹಲ್ಗಾಮ್ ಭಯೋತ್ಪಾದಕ ದಾಳಿ ಭಾರತದ ಕಠಿಣ ಪ್ರತಿಕ್ರಿಯೆ ಬಗ್ಗೆ ಜನರಿಗೆ ಭರವಸೆ ನೀಡಿದರು.ನವದೆಹಲಿಯಲ್ಲಿ ನಡೆದ ಸಂಸ್ಕೃತಿ ಜಾಗರಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡುವ ಭಾರತದ ದೃಢಸಂಕಲ್ಪದ ಬಗ್ಗೆ ಒತ್ತಿ ಹೇಳಿದರು.”ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ನೀತಿ ಹಾಗೂ ಪರಿಶ್ರಮ, ಕ್ಷಮತೆ ಮತ್ತು ದೃಢ ಸಂಕಲ್ಪದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರು ತಮ್ಮ ಜೀವನದಲ್ಲಿ ಅಪಾಯಗಳನ್ನು ಸ್ವೀಕರಿಸಲು ಕಲಿತ ರೀತಿ ನಿಮಗೆಲ್ಲ ಗೊತ್ತು. ಹಾಗಾಗಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ನೀವು ಏನನ್ನು ಬಯಸಿದ್ದೀರೋ, ಅದು ಖಂಡಿತವಾಗಿಯೂ ನೆರವೇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.
“ರಕ್ಷಣಾ ಸಚಿವನಾಗಿ, ನನ್ನ ಸೈನಿಕರೊಂದಿಗೆ ದೇಶದ ಗಡಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು. ನಮ್ಮ ದೇಶದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವವರಿಗೆ ಸೂಕ್ತ ಉತ್ತರ ನೀಡುವುದು ನನ್ನ ಜವಾಬ್ದಾರಿ” ಎಂದರು.
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು.ಈ ದಾಳಿಗೆ ಕಾರಣರಾದ ಭಯೋತ್ಪಾದಕರು ಮತ್ತು ಅದರ ಹಿಂದಿರುವ ರೂವಾರಿಗಳು ಅವರ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭಯೋತ್ಪಾದನೆಯ ಉಳಿದ ಭದ್ರಕೋಟೆಗಳನ್ನು ನಿರ್ಮೂಲನೆ ಮಾಡುವ ಸಮಯ ಬಂದಿದೆ ಮತ್ತು 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದನೆಯ ಅಪರಾಧಿಗಳ ಬೆನ್ನೆಲುಬು ಮುರಿಯಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭರವಸೆ ನೀಡಿದ್ದರು.













































